ನವದೆಹಲಿ: ಲಡಾಖ್ ಗಡಿಯಲ್ಲಿ ಭಾರತ- ಚೀನಾ ನಡುವಿನ ಘರ್ಷಣೆ ಬೆನ್ನಲ್ಲೇ, ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಎಂಬ ಕೂಗು ಈಗ ಮತ್ತೆ ಕೇಳಿ ಬಂದಿದೆ. ಸಹಜವಾಗಿಯೇ ಇದು ಚೀನಾದ ಕೋಪಕ್ಕೆ ಕಾರಣವಾಗಿದೆ.
ಆರ್ಎಸ್ಎಸ್ನ ಅಂಗವಾಗಿರುವ ಸ್ವದೇಶಿ ಜಾಗರಣ್ ಮಂಚ್ ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಎಂಬ ಘೋಷಣೆಯನ್ನು ಮತ್ತೆ ಶುರು ಮಾಡಿದೆ ಎಂದು ಚೀನಾದ ಮುಖವಾಣಿಯಾಗಿರುವ ಗ್ಲೋಬಲ್ ಟೈಮ್ಸ್ ಪತ್ರಿಕೆ ಟೀಕಿಸಿದೆ. ಘರ್ಷಣೆಯಲ್ಲಿ ಮೃತಪಟ್ಟ ಚೀನಾದವರೆಷ್ಟು ಎಂಬ ಮಾಹಿತಿಯನ್ನೂ ಎಲ್ಲಿಯೂ ಪ್ರಕಟಿಸದ ಪತ್ರಿಕೆ, ಭಾರತದಲ್ಲಿ ಶುರುವಾಗಿರುವ ‘ಚೀನಾ ವಿರೋಧಿ’ ಹೋರಾಟದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ.
ಇದನ್ನೂ ಓದಿ; ಈ ವೀರಕಲಿಗಳಿಗೆ ನಿಮ್ಮದೊಂದು ಸಲಾಂ ಇರಲಿ..! 20 ಹುತಾತ್ಮ ಯೋಧರ ಪಟ್ಟಿ ಇಲ್ಲಿದೆ
ಗಡಿಯಲ್ಲಿ ಉದ್ವಿಗ್ನತೆ ನೆಲೆಸಿದಾಗಲೆಲ್ಲ ಇಂಥದ್ದೊಂದು ವರ್ತನೆ ಚೀನಾ ವಿರೋಧಿಗಳಲ್ಲಿ ಕಂಡಬರುತ್ತದೆ. ಚೀನಾದೊಂದಿಗಿನ ಆರ್ಥಿಕ ವಹಿವಾಟನ್ನು ಬಂದ್ ಮಾಡಿ, ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಎಂಬ ಕೂಗು ಕೇಳುತ್ತದೆ ಎಂದು ಪತ್ರಿಕೆ ಪ್ರಕಟಿಸಿರುವ ವರದಿಯಲ್ಲಿ ಹೇಳಲಾಗಿದೆ.
ಇದಲ್ಲದೇ ಚೀನಾದೊಂದಿಗಿನ ಬಂಡವಾಳ ಹೂಡಿಕೆ, ವ್ಯಾಪಾರದೊಂದಿಗೆ ಸಂಘರ್ಷಕ್ಕಿಳಿಯುವಂತೆ ಈ ಗುಂಪು ಒತ್ತಾಯಿಸುತ್ತದೆ. ಇದಲ್ಲದೇ, ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು, ಹಿಂಬಾಲಕರನ್ನು ಹೊಂದಿರುವ ಕೆಲ ಭಾರತೀಯ ಸೆಲೆಬ್ರಿಟಿಗಳು ಕೂಡ ಇದಕ್ಕೆ ದನಿಗೂಡಿಸುತ್ತಾರೆ ಎಂದು ಗ್ಲೋಬಲ್ ಟೈಮ್ಸ್ ದೂರಿದೆ.
ಇದನ್ನೂ ಓದಿ; ಭಾರತಕ್ಕೆ ಪಾಕಿಸ್ತಾನಕ್ಕಿಂತಲೂ ದೊಡ್ಡ ಗಡಿ ತಂಟೆಕೋರ ಚೀನಾ….!
ಭಾರತದ ಕೆಲವರು ಸ್ವಾರ್ಥಕ್ಕಾಗಿ ಇಂಥದ್ದೊಂದು ಕೃತ್ಯವನ್ನು ಬೆಂಬಲಿಸುತ್ತಾರೆ. ಗಡಿ ವಿವಾದ ಉಂಟಾದಾಗಲೆಲ್ಲ ಅವರಿಗೊಂದು ಅವಕಾಶ ಸಿಗುತ್ತದೆ. ಆದರೆ, ಇಂಥದ್ದೊಂದು ಕೂಗು ದ್ವಿಪಕ್ಷೀಯ ಒಪ್ಪಂದಗಳ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ಗ್ಲೋಬಲ್ ಟೈಮ್ಸ್ನಲ್ಲಿ ಲೇಖನ ಬರೆದಿರುವ ಚೈನೀಸ್ ಅಕಾಡೆಮಿ ಆಫ್ ಸೋಷಿಯಲ್ ಸೈನ್ಸ್ ಪ್ರಾಧ್ಯಾಪಕ ಲಿಯು ಕ್ಸಿಯೋಕ್ಸು ಎಂಬುವನ ಹೇಳಿಕೆಯಾಗಿದೆ.
ಒಟ್ಟಿನಲ್ಲಿ ಭಾರತದಲ್ಲಿ ಚೀನಾ ವಿರುದ್ಧ ಕೂಗು ಎದ್ದಾಗಲೆಲ್ಲ ಅಲ್ಲಿನವರಿಗೆ ಆತಂಕ ಉಂಟಾಗುವುದು ಸಹಜವೇ. ಚೀನಾ ಪಾಠ ಕಲಿಸಲು ಇರುವ ಮಾರ್ಗವೂ ಕೂಡ ಇದೇ ಆಗಿದೆ ಎಂಬುದು ತಜ್ಞರ ಅಭಿಮತ.
ರಾಷ್ಟ್ರೀಯ ಭದ್ರತಾ ಮಂಡಳಿ ನೀಡಿದೆ ಎಚ್ಚರಿಕೆ …! ಈ ಚೀನಿ ಆ್ಯಪ್ಗಳಿದ್ದರೆ ಅಪಾಯ