ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿಯನ್ನು ಪ್ರಧಾನಿ ನರೇಂದ್ರ ಮೋದಿ ರದ್ದುಗೊಳಿಸಿದ್ದೇ ಲಡಾಖ್ ಬಿಕ್ಕಟ್ಟಿಗೆ ಕಾರಣ ಎಂದು ಚೀನಾ ಹೇಳಿದೆ.
ಪಾಕಿಸ್ತಾನದಲ್ಲಿನ ಚೀನಾದ ರಾಯಭಾರ ಕಚೇರಿಯಲ್ಲಿ ವಕ್ತಾರರಾಗಿರುವ ಚೀನಾದ ವ್ಯಾಂಗ್ ಕ್ಸಿಯಾಂಗ್ಫ್ಯಾಂಗ್ ಎಂಬುವರು ಈ ಬಗ್ಗೆ ಟ್ವೀಟ್ ಮಾಡಿದ್ದು, 370ನೇ ವಿಧಿ ರದ್ದುಗೊಳಿಸಿ ಜಮ್ಮು ಮತ್ತು ಕಾಶ್ಮೀರವನ್ನು ಪ್ರತ್ಯೇಕ ರಾಜ್ಯವಾಗಿಯೂ, ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಯೂ ಘೋಷಿಸಿ ಭಾರತ ಮಾಡಿದ ತಪ್ಪಿಗಾಗಿ ಲಡಾಖ್ ಬಿಕ್ಕಟ್ಟು ಉಂಟಾಗಿದೆ ಎಂದು ಹೇಳಿದ್ದಾರೆ.
ಕಾಶ್ಮೀರದ ಸ್ಥಾನಮಾನ ಬದಲಾಗಿದ್ದೇ ಗಡಿಯಲ್ಲಿನ ಉದ್ವಿಗ್ನತೆಗೆ ಕಾರಣ ಎಂಬ ಅರ್ಥದಲ್ಲಿ ಚೀನಾದ ಆಂತರಿಕ ಭದ್ರತೆ ಅಥವಾ ಮುಖ್ಯವಾದ ಬೇಹುಗಾರಿಕಾ ಸಂಸ್ಥೆಯೊಂದಿಗೆ ಗುರುತಿಸಿಕೊಂಡಿರುವ ವ್ಯಕ್ತಿಯೊಬ್ಬರು ಬರೆದಿದ್ದಾರೆ ಎನ್ನಲಾದ ಲೇಖನವನ್ನೂ ಅವರು ತಮ್ಮ ಟ್ವೀಟ್ಗೆ ಲಗತ್ತಿಸಿದ್ದಾರೆ.
ಕಾಶ್ಮೀರದಲ್ಲಿ ಭಾರತ ಏಕಪಕ್ಷೀಯವಾಗಿ ಕೆಲವೊಂದು ನಿರ್ಣಯಗಳನ್ನು ಜಾರಿಗೊಳಿಸಿದೆ. ಇದರಿಂದ ಪ್ರಾದೇಶಿಕ ಶಾಂತಿಗೆ ಧಕ್ಕೆಯುಂಟಾಗಿದ್ದು, ಚೀನಾ ಮತ್ತು ಪಾಕಿಸ್ತಾನದ ಸಾರ್ವಭೌಮತ್ವಕ್ಕೆ ಸವಾಲು ಒಡ್ಡುವಂತಿದೆ. ಇದರಿಂದಾಗಿ ಭಾರತ-ಪಾಕಿಸ್ತಾನ ಮತ್ತು ಚೀನಾ-ಭಾರತ ನಡುವಿನ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಜಟಿಲಗೊಂಡಿದೆ ಎಂದು ವ್ಯಾಂಗ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮನೆ ಬಾಗಿಲಿಗೆ ಕ್ವಾರಂಟೈನ್ ನೋಟಿಸ್ !
ಬಹುಶಃ ಇದು ವ್ಯಾಂಗ್ ಅವರ ವೈಯಕ್ತಿಕ ಅಭಿಪ್ರಾಯ ಇದ್ದಿರಬಹುದು ಎಂದು ಭಾವಿಸಲಾಗುತ್ತಿದೆ. ಆದರೂ, ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನತೆಗೆ ಕಾಶ್ಮೀರದ ಸ್ಥಾನಮಾನ ಬದಲಿಸುವ ಕೇಂದ್ರ ಸರ್ಕಾರದ ನಿರ್ಧಾರ ಕಾರಣ ಎಂದು ಚೀನಾದ ಅಧಿಕಾರಿಯೊಬ್ಬರು ಅಧಿಕೃತವಾಗಿ ನೀಡಿರುವ ಹೇಳಿಕೆ ಇದಾಗಿರುವುದು ಗಮನಾರ್ಹವಾಗಿದೆ.
ಕಳೆದ ವರ್ಷದ ಆಗಸ್ಟ್ 5ರಂದು ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿತ್ತು. ಈ ಸಂದರ್ಭದಲ್ಲಿ ಹೇಳಿಕೆ ನೀಡಿದ್ದ ಚೀನಾದ ವಿದೇಶಾಂಗ ಸಚಿವಾಲಯ ಭಾರತದ ಕ್ರಮವನ್ನು ಖಂಡಿಸಿತ್ತು.
ಈ ವಿದ್ಯಮಾನದ ನಂತರದಲ್ಲಿ ಭಾರತ ಗಡಿ ವಿಷಯವಾಗಿ ತುಂಬಾ ಎಚ್ಚರಿಕೆ ವಹಿಸಬೇಕು. ಏಕೆಂದರೆ, ಅದರ ಈ ನಿರ್ಧಾರದಿಂದ ಗಡಿ ವಿವಾದ ಮತ್ತಷ್ಟು ಜಟಿಲಗೊಂಡಿದೆ. ನಮ್ಮ ಹಿಡಿತದಲ್ಲಿರುವ ಪ್ರದೇಶಗಳನ್ನು ಭಾರತದ ಆಡಳಿತಾತ್ಮಕ ವ್ಯಾಪ್ತಿಗೆ ಸೇರಿಸಿಕೊಳ್ಳುವುದು ತಪ್ಪಾಗುತ್ತದೆ ಎಂದು ಚೀನಾ-ಭಾರತದ ಪಶ್ಚಿಮ ಭಾಗದ ಗಡಿ ವಿಷಯವನ್ನು ಪರೋಕ್ಷವಾಗಿ ಪ್ರಸ್ತಾಪಿಸಿ, ಎಚ್ಚರಿಕೆಯನ್ನೂ ನೀಡಿತ್ತು.
ಅದುವೇ ಲಡಾಖ್ ಪ್ರದೇಶವಾಗಿದ್ದು, ಈ ಪ್ರದೇಶ ತನ್ನದು ಎಂದು ಭಾರತ ಹೇಳುತ್ತಿದೆ. ಆದರೆ ಇದು ತನ್ನದೆಂದು ಚೀನಾ ಪ್ರತಿಪಾದಿಸುತ್ತಿದೆ.
ನಾಲ್ಕಂತಸ್ತಿನ ಕಟ್ಟಡಕ್ಕೆ ಮುಳುವಾಯ್ತು ನೀರಾವರಿ ಕಾಲುವೆ ಕಾಮಗಾರಿ