ಚಳ್ಳಕೆರೆ: ಈ ಸೀಸನ್ಗೆ ಆಂಧ್ರದಿಂದ ನಗರಕ್ಕೆ ಲಗ್ಗೆ ಇಡುತ್ತಿದ್ದ ಮಾವಿನ ಹಣ್ಣು ಈ ಬಾರಿ ಕರೊನಾ ಕಾರಣಕ್ಕೆ ತಗ್ಗಿದ್ದು ವ್ಯಾಪಾರಿಗಳನ್ನು ಸಂಕಷ್ಟಕ್ಕೆ ದೂಡಿದೆ.
ಮಾವಿನ ಕಾಲ ಬಂತೆಂದರೆ ಬೆಳೆಗಾರರು ಆಂಧ್ರದಿಂದ ತೋತಾಪುರಿ, ಬೇನಿಶ್, ಮಲ್ಲಿಕಾ, ಬಾದಾಮಿ, ನೀಲಂ ತಳಿಯ ಹಣ್ಣುಗಳನ್ನು ಟೆಂಪೋಗಳಲ್ಲಿ ಮೂಟೆಗಟ್ಟಲೇ ತಂದು ಸ್ಥಳೀಯ ವ್ಯಾಪಾರಸ್ಥರಿಗೆ ಮಾರಾಟ ಮಾಡುತ್ತಿದ್ದರು.
ಕಡಿಮೆ ದರದಲ್ಲಿ ಹಣ್ಣುಗಳನ್ನು ಖರೀದಿಸುತ್ತಿದ್ದ ಸಣ್ಣಪುಟ್ಟ ವ್ಯಾಪಾರಸ್ಥರು ಬೀದಿಬದಿ ದಿನಕ್ಕೆ 500ರಿಂದ ಸಾವಿರ ರೂ. ವರೆಗೆ ಲಾಭ ಪಡೆಯುತ್ತಿದ್ದರು. ಸೋಂಕಿನ ಹಾವಳಿಯಿಂದ ಈ ವರ್ಷ ಆಂಧ್ರದ ಗಡಿಭಾಗದ ಚೆಕ್ಪೋಸ್ಟ್ಗಳಲ್ಲಿ ಜನರ ಸಂಚಾರ ಮತ್ತು ಸರಕು-ಸಾಗಾಣಿಕೆ ಮೇಲೆ ನಿರ್ಬಂಧ ಮಾಡಿದ ಹಿನ್ನೆಲೆಯಲ್ಲಿ ನಗರಕ್ಕೆ ಬರುವ ಮಾವು ಕಡಿಮೆಯಾಗಿದೆ.
ಸ್ಥಳೀಯ ಬೆಳೆಗಾರರು ಬೆಳೆದ ಫಸಲು ವ್ಯಾಪಾರಿಗಳಿಗೆ ಸದ್ಯ ಆಧಾರವಾಗಿದೆ. ತಾಲೂಕಿನಲ್ಲಿ 234 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಿದ್ದು, 86 ಹೆಕ್ಟೇರ್ನಲ್ಲಿ ಮಲಗೋಬಾ, ಬೇನಿಶ್, ಮಲ್ಲಿಕಾ, ತೋತಾಪುರಿ ತಳಿಯ ಮಾವು ಫಸಲು ಬಂದಿದೆ. ಒಂದು ಕೆಜಿಗೆ 35ರಿಂದ 40 ರೂ. ನಂತೆ ರೈತರು ಸ್ಥಳೀಯವಾಗಿ ಮಾರಾಟ ಮಾಡುತ್ತಿದ್ದಾರೆ.
ವಿರೂಪಾಕ್ಷಪ್ಪ
> ಸ.ನಿರ್ದೇಶಕ, ತೋಟಗಾರಿಕೆ ಇಲಾಖೆ, ಚಳ್ಳಕೆರೆ
ಕರೊನಾ ಕಾರಣಕ್ಕೆ ಈ ಬಾರಿ ಮಾವಿನ ಫಸಲು ಬರುವುದು ಕಡಿಮೆಯಾಗಿದೆ. ಆಂಧ್ರಪ್ರದೇಶದ ಹಣ್ಣು ನಗರಕ್ಕೆ ಬಂದಿಲ್ಲ. ಇದರಿಂದ ಸ್ಥಳೀಯ ವ್ಯಾಪಾರಿಗಳಿಗೆ ಸಮಸ್ಯೆಯಾಗಿದೆ.
> ಲಲಿತಮ್ಮ ಬೀದಿಬದಿ ವ್ಯಾಪಾರಿ