ಚಡಚಣ: ರಾಷ್ಟ್ರೀಯ ಪೌರತ್ವ ನೋಂದಣಿ ವಿರೋಧಿಸಿ ಬಹುಜನ ಕ್ರಾಂತಿ ಮೋರ್ಚಾ, ಭೀಮ ಆರ್ಮಿ, ದಲಿತ ಸಮನ್ವಯ ಸಮಿತಿ, ರಿಪಬ್ಲಿಕ್ ಸೇನಾ, ಬಹುಜನ ಸಮಾಜ ಪಾರ್ಟಿ, ಉಲಮಾ ಕಮಿಟಿ, ಲುಕಮಾನ್ ಅಲ್ಪ ಸಂಖ್ಯಾತರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸೇರಿ ವಿವಿಧ ಮುಸ್ಲಿಂ ಸಂಘಟನೆಗಳು ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎನ್.ಬಿ. ಗೆಜ್ಜಿ ಅವರ ಮೂಲಕ ರಾಷ್ಟ್ರಪತಿಗೆ ಬುಧವಾರ ಮನವಿ ಸಲ್ಲಿಸಿದವು.
ಮುಖಂಡರಾದ ಹಾಸೀಂಪೀರ್ ಮುಲ್ಲಾ, ಡಿಎಸ್ಎಸ್ ಸಂಚಾಲಕ ಮಹಾದೇವ ಬನಸೋಡೆ, ರಾಜು ಸಿಂಗೆ ಮತ್ತಿತರರು ಮಾತನಾಡಿ, ಬಿಜೆಪಿ ಸರ್ಕಾರವು ಸಿಎಎ ಹಾಗೂ ಎನ್ಆರ್ಸಿ ಕಾನೂನು ಜಾರಿಗೆ ತರುವ ಮೂಲಕ ದೇಶ ಒಡೆಯುವ ಹಾಗೂ ಜಾತಿ ದ್ವೇಶ ಬಿತ್ತುವ ಕೆಲಸಕ್ಕೆ ಕೈ ಹಾಕಿದೆ. ಸ್ವಾತಂತ್ರೃ ಸಿಕ್ಕಾಗಿನಿಂದ ಇಲ್ಲದ್ದು ಈಗ ಏಕೆ ಬೇಕು. ಈ ಕಾನೂನಿಂದ ದೇಶಕ್ಕೆ ಏನಾದರೂ ಲಾಭವಿದೆಯೇ ಎಂದು ಪ್ರಶ್ನಿಸಿದರಲ್ಲದೆ, ಎಲ್ಲ ಧರ್ಮದ ಜನರು ದೇಶದಲ್ಲಿ ಶಾಂತಿಯಿಂದ ನೆಲೆಸಿದ್ದಾರೆ. ಎನ್ಆರ್ಸಿ ಹಾಗೂ ಸಿಎಎಯಿಂದ ದೇಶದಲ್ಲಿ ಬೆಂಕಿ ಹತ್ತಿ ಉರಿಯುತ್ತಿದೆ. ಕೂಡಲೇ ಈ ಕಾನೂನು ರದ್ದುಗೊಳಿಸಬೇಕೆಂದು ಅವರು ಆಗ್ರಹಿಸಿದರು.
ಇದೇ ವೇಳೆ ವಿವಿಧ ಸಂಘಟನೆ ಮುಖಂಡರು, ಕಾರ್ಯಕರ್ತರು ಹಾಗೂ ನೂರಾರು ಸಾರ್ವಜನಕರು ಉಪಸ್ಥಿತರಿದ್ದರು.