ಬೆಂಗಳೂರು: ಡಿಜೆ ಹಳ್ಳಿ ಗಲಭೆಯಲ್ಲಿ ಉದ್ರಿಕ್ತರ ಕೆಂಗಣ್ಣಿಗೆ ಗುರಿಯಾಗಿದ್ದು ಪೊಲೀಸ್ ಠಾಣೆ ಹಾಗೂ ವಾಹನಗಳಷ್ಟೇ ಅಲ್ಲ. ತಾನು ಪ್ರೀತಿಯಿಂದ ಹಡೆದ ನಾಲ್ಕು ಕಂದಮಗಳನ್ನು ಕಳೆದುಕೊಂಡು ಮೂಖ ಜೀವಿಯೊಂದು ರೋಧಿಸುತ್ತಿರುವ ದೃಶ್ಯ ಕಣ್ಣೀರು ತರಿಸುವಂತಿದೆ.
ಹೌದು, ಒಂದು ವಾರದ ಹಿಂದಷ್ಟೇ ಡಿಜೆ ಹಳ್ಳಿ ಪೊಲೀಸ್ ಠಾಣೆಯ ಬೇಸ್ಮೆಂಟ್ನಲ್ಲಿ ಬೆಕ್ಕೊಂದು ನಾಲ್ಕು ಮರಿಗಳಿಗ ಜನ್ಮ ನೀಡಿತ್ತು. ಆದರೆ, ದುಷ್ಕರ್ಮಿಗಳ ಭೀಕರ ಕ್ರೌರ್ಯಕ್ಕೆ ನಾಲ್ಕು ಪುಟ್ಟ ಮರಿಗಳು ಸುಟ್ಟು ಕರಕಲಾಗಿ, ತಾಯಿ ಪ್ರೀತಿಯನ್ನು ಶಾಶ್ವತವಾಗಿ ಕಡಿದುಕೊಂಡಿವೆ.
ಇತ್ತ ತನ್ನೊಂದಿಗೆ ಆಡಿ ನಲಿಯುತ್ತಾ ಬೆಳೆಯಬೇಕಿದ್ದ ಕಂದಮ್ಮಗಳು ಯಾರೋ ಮಾಡಿದ ತಪ್ಪಿಗೆ ಬೆಂಕಿಗೆ ಬಲಿಯಾದವಲ್ಲ ಎಂಬ ನೋವಿನಿಂದ ನಿರೀಕ್ಷೆಯ ಕಣ್ಣುಗಳಿಂದ ತಾಯಿ ಬೆಕ್ಕು ಪದೇ ಪದೇ ಬೇಸ್ಮೆಂಟ್ ಹೋಗಿ ನೋಡುತ್ತಿದೆ. ಈ ದೃಶ್ಯ ಎಂಥವರ ಕಣ್ಣಲ್ಲೂ ನೀರು ತರಿಸದೇ ಇರದು.
ತನ್ನ ಕಂದಮ್ಮಗಳು ಕಾಣದೇ ತೀವ್ರ ದುಃಖದಲ್ಲಿ ಠಾಣೆ ಹೊರ ಭಾಗ ತಾಯಿ ಬೆಕ್ಕು ಕೂಗಾಡುತ್ತಾ ಓಡಾಡುತ್ತಿದೆ. ಬೆಕ್ಕಿನ ಸ್ಥಿತಿ ಕಂಡು ಪೊಲೀಸ್ ಸಿಬ್ಬಂದಿಗೂ ಬೇಸರವಾಗಿದೆ. ಮುಖ ಜೀವಿಯ ರೋಧನೆ ಆ ದೇವರಿಗೆ ಪ್ರೀತಿ ಎನ್ನುವಂತಿದೆ. ದುಷ್ಕರ್ಮಿಗಳ ಅಟ್ಟಹಾಸಕ್ಕೆ ಅಮಾಯಕ ಪ್ರಾಣಿಗಳು ಸಹ ಬಲಿಯಾಗಿರುವುದು ದುರ್ದೈವದ ಸಂಗತಿಯಾಗಿದೆ. ಮಾನವೀಯತೆ ಉಳಿಯಬೇಕಿದೆ. ಇಲ್ಲವಾದಲ್ಲಿ ತಾಯಿ ಬೆಕ್ಕಿನ ಶಾಪ ತಟ್ಟದೇ ಇರದು ಎಂಬುದು ಜನರ ಅಭಿಪ್ರಾಯವಾಗಿದೆ. (ದಿಗ್ವಿಜಯ ನ್ಯೂಸ್)