ಶಿವಮೊಗ್ಗ: ಮರಾಠ ಮತ್ತು ಲಿಂಗಾಯಿತ-ವೀರಶೈವ ಅಭಿವೃದ್ಧಿ ನಿಗಮಗಳನ್ನು ತಕ್ಷಣವೇ ಕೈ ಬಿಡಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಾಯನ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಎಲ್ಲ ಜಾತಿಗಳ ಸಂಘಟನೆಗಳು ಮತ್ತು ರಾಜಕೀಯ ಮುಖಂಡರು ತಮ್ಮ ಜಾತಿ ಅಭಿವೃದ್ಧಿ ನಿಗಮಗಳನ್ನು ಸ್ಥಾಪನೆಗೆ ಬೀದಿಗಿಳಿಯುವ ಮೊದಲು ಸರ್ಕಾರ ಎಚ್ಚೆತ್ತುಕೊಂಡು ಈಗಾಗಲೇ ರಚಿಸಿರುವ ಎರಡೂ ಅಭಿವೃದ್ಧಿ ನಿಗಮಗಳನ್ನು ರದ್ದುಪಡಿಸಬೇಕೆಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ರಾಜ್ಯದಲ್ಲಿ ಮುಸ್ಲಿಮರು, ಒಕ್ಕಲಿಗರು, ಜೈನರು, ತಮಿಳಿಗರು, ತಿಗಳರು, ಕುರುಬರು, ಕುಣಬಿ ಸಮಾಜದವರು ಸೇರಿ ಹಲವು ಜಾತಿಗಳು ಹಾಸುಹೊಕ್ಕಾಗಿವೆ. ಸರ್ಕಾರ ಕೇವಲ ಚುನಾವಣೆ ದೃಷ್ಟಿಯಿಂದ ನಿಗಮಗಳನ್ನು ಸ್ಥಾಪಿಸಬಾರದು. ಇಲ್ಲವಾದರೆ ಎಲ್ಲ ಸಮಾಜದ ನಿಗಮಗಳನ್ನು ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿದರು.
ಮಹಾರಾಷ್ಟ್ರ ಆಕ್ರಮಿಸಿಕೊಂಡಿರುವ ಕೊಲ್ಹಾಪುರ, ಸಾಂಗ್ಲಿ, ಸೋಲ್ಲಾಪುರ, ಲಾತೂರ್ ಪ್ರದೇಶಗಳನ್ನು ಕರ್ನಾಟಕಕ್ಕೆ ಸೇರಿಸಬೇಕು. ಆಕ್ರಮಿಸಿಕೊಂಡಿರುವ ಕಾಸರಗೋಡನ್ನೂ ರಾಜ್ಯಕ್ಕೆ ಸೇರಿಸಬೇಕು. ಇದರ ಜತೆಗೆ ರಾಜ್ಯದಲ್ಲಿ ಹೆಚ್ಚು ಸಂಖ್ಯೆಯಲ್ಲಿರುವ ಕೊಂಕಣಿ, ಶೆಟ್ಟರು, ಕೊಡಗು ಭಾಷಿಗರು ಹಾಗೂ ಅಲ್ಪಸಂಖ್ಯಾತರಾಗಿರುವ ಒಕ್ಕಲಿಗರ ನಿಗಮವನ್ನೂ ರಚಿಸಿ ಪ್ರತಿ ನಿಗಮಕ್ಕೂ 100 ಕೋಟಿ ರೂ. ಅನುದಾನ ಮೀಸಲಿಡಬೇಕು ಎಂದರು.
ಖಜಾಂಚಿ ವೆಂಕಟೇಶ್ ಹೊಳೆಮಡಿಲು, ಎಚ್.ಎಂ.ಸಂಗಯ್ಯ, ಆಶಾ ಹರೀಶ್, ಸಾಕ್ರೆನಾಯ್್ಕ ಸುದ್ದಿಗೋಷ್ಠಿಯಲ್ಲಿದ್ದರು.