ನವದೆಹಲಿ: ಕಾವೇರಿ ಕಣಿವೆ ಪ್ರದೇಶದಲ್ಲಿ ಉತ್ತಮ ಮಳೆಯಾಗುವ ವರ್ಷದಲ್ಲಿ ವಾರ್ಷಿಕವಾಗಿ ಸುಮಾರು 90 ಟಿಎಂಸಿ ನೀರು ಕಾವೇರಿ ನದಿಯಲ್ಲಿ ಹೆಚ್ಚುವರಿಯಾಗಿ ಲಭ್ಯವಿರುತ್ತದೆ. ಈ ನೀರನ್ನು ಬಳಸಿಕೊಳ್ಳಲು ನಮಗೆ ಅವಕಾಶ ನೀಡಬೇಕು ಎಂದು ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಈ ಅರ್ಜಿಯನ್ನು ಸರ್ಕಾರ ಸಲ್ಲಿಸಿತ್ತು. ಅರ್ಜಿ ವಿಚಾರಣೆಗೆ ಸಮ್ಮತಿಸಿರುವ ಸುಪ್ರೀಂಕೋರ್ಟ್ ನ್ಯಾ. ಅಭಯ್ ಓಕಾ ಮತ್ತು ನ್ಯಾ ಉಜ್ಜಲ್ ಭುಯಾನ್, ಈ ಅರ್ಜಿಯಲ್ಲಿರುವ ಅಂಶಗಳು ಅಂತಾರಾಜ್ಯ ಜಲವಿವಾದ ಕಾಯ್ದೆ ಅನುಸಾರ ಸಮರ್ಥನೀಯವೇ? ಕಣಿವೆಯ ಮೇಲ್ಭಾಗದ ರಾಜ್ಯ ಕರ್ನಾಟಕಕ್ಕೆ ಹೆಚ್ಚುವರಿ ನೀರು ಬಳಸಿಕೊಳ್ಳುವ ಅಧಿಕಾರ ಇದೆಯೇ? ಹೆಚ್ಚುವರಿ ನೀರು ಬಳಸಿಕೊಳ್ಳುವ ಸಲುವಾಗಿ ಕರ್ನಾಟಕ ಕೈಗೆತ್ತಿಕೊಳ್ಳಲು ಬಯಸಿರುವ ಯೋಜನೆಗಳು ತಮಿಳುನಾಡಿನ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡಲಿದೆಯೇ ಇಲ್ಲವೇ ಎಂಬೆಲ್ಲಾ ಅಂಶಗಳ ಮೇಲೆ ವಿಚಾರಣೆ ನಡೆಸೋಣ ಎಂದು ಕಣಿವೆ ರಾಜ್ಯಗಳಿಗೆ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ 6 ವಾರಗಳ ಒಳಗಾಗಿ ದಾಖಲೆಗಳನ್ನು ಸಲ್ಲಿಸುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ. ಮುಂದಿನ ವಿಚಾರಣೆ ಮೇ. 7ಕ್ಕೆ ನಿಗದಿಯಾಗಿದೆ.