ಬೆಂಗಳೂರು: ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಟೆರ್ರಿಸ್ಟ್ಗಳಿಗೆ ನಮ್ದೂಕೆ ಸರ್ಕಾರವೆಂಬ ಭಾವನೆ ಬರುತ್ತದೆ. ಈ ತರಹದ ಚಟುವಟಿಕೆ ಮಾಡೋಕೆ ಮುಂದಾಗಿದ್ದಾರೆ, ಎಚ್ಚರವಹಿಸಬೇಕಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಕಳೆದ ಬಾರಿ ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ ಆದಾಗ, ಕೆಪಿಸಿಸಿ ಅಧ್ಯಕ್ಷರು ಅವರು ಅಮಾಯಕರು ಅಂತಾ ಹೇಳಿದ್ದರು. ಈಗ ಬಂಧಿತರನ್ನು ಅಮಾಯಕರೆಂದು ಡಿ.ಕೆ.ಶಿವಕುಮಾರ್ ಅಪ್ಪಿಕೊಳ್ಳೋಕೆ ಹೋಗದಿರಲಿ, ಪೊಲೀಸರ ತನಿಖೆಗೆ ಸಹಕರಿಸಲಿ ಎಂದು ಸಿ.ಟಿ.ರವಿ ವ್ಯಂಗ್ಯಭರಿತ ಸಲಹೆ ನೀಡಿದರು.
ಭಯೋತ್ಪಾದಕರ ಜಾಲ ರಾಜ್ಯದಲ್ಲಿ ವಿಸ್ತರಿಸುತ್ತಿರುವುದು ನಿರ್ವಿವಾದದ ಸಂಗತಿ. ವಿವೇಚನೆಯಿಲ್ಲದೆ ಮತಬ್ಯಾಂಕ್ಗಾಗಿ ಅವರೆಲ್ಲ ನಮ್ಮ ಸೋದರರು ಎಂದು ಅಪ್ಪಿಕೊಳ್ಳಲು ಬೆಂಗಳೂರು, ಕರ್ನಾಟಕ ಅಪಾಯಕ್ಕೆ ಸಿಲುಕಬಹುದು ಎಂದು ಎಚ್ಚರಿಸಿದರು.
ಶಂಕಿತ ಉಗ್ರರನ್ನು ಬಂಧಿಸಿ ಕ್ರಮ ಸ್ವಾಗತಾರ್ಹ. ಸಂಬಂಧಿಸಿದ ಇಲಾಖೆಗೆ ಅಭಿನಂದನೆ ಸಲ್ಲಿಸುವೆ ಇನ್ನೊಬ್ಬ ಶಂಕಿತ ಉಗ್ರ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಸಂಶಯಾಸ್ಪದ ಉಗ್ರರ ಜಾಲ ಬೇಧಿಸಲು ತನಿಖೆಯನ್ನು ಎನ್ಐಎಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.
ಬೆಂಗಳೂರಿನ ಹಲವೆಡೆ ಬಾಂಬ್ ಸ್ಫೋಟಿಸಲು ಯೋಜಿಸಿದ್ದರು ಎಂಬುದು ಬಹಳ ಗಂಭೀರವಾದ ಸಂಗತಿ. ಕಾಂಗ್ರೆಸ್ ನಾಯಕರು ಈಗಲಾದರೂ ಮನ ಪರಿವರ್ತನೆ ಮಾಡಿಕೊಳ್ಳಲಿ ಎಂದರು. ಈ ಜಾಲ ರಾಷ್ಟ್ರೀಯ, ಅಂತಾರಾಷ್ಟ್ರೀಯಮಟ್ಟದಲ್ಲಿ ಸಕ್ರಿಯವಾಗಿರುವ ಸಾಧ್ಯತೆಗಳಿವೆ. ಎನ್ಐಎ ತನಿಖೆಗೆ ಒಪ್ಪಿಸುವುದೇ ಸೂಕ್ತವೆಂದು ಸಿ.ಟಿ.ರವಿ ಪುನರುಚ್ಚರಿಸಿದರು.
ಬಿಎಸ್ವೈ ಕಾಲಿಗೆರಗಿ ಆಶೀರ್ವಾದ
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದ ಸಿ.ಟಿ.ರವಿ, ಬಿಎಸ್ವೈ ಕಾಲಿಗೆರಗಿ ಹುಟ್ಟು ಹಬ್ಬದ ಆಶೀರ್ವಾದ ಪಡೆದರು. ಈ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಸಭೆಯಲ್ಲಿ ಮೂರು ಬಾರಿ ಭೇಟಿಯಾಗಿದ್ದೆ ವೈಯಕ್ತಿಕವಾಗಿ ಮಾತನಾಡಲು ಆಗಿರಲಿಲ್ಲ. ಪಕ್ಷ ಈಗ ಕೊಟ್ಟಿರುವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯೇ ದೊಡ್ಡದು. ನಾನು ಯಾವುದೇ ಉನ್ನತ ಹುದ್ದೆ ಆಕಾಂಕ್ಷಿಯಲ್ಲವೆಂದು ಸ್ಪಷ್ಟಪಡಿಸಿದರು.