ಬೆಂಗಳೂರು: ರಾಜ್ಯಾದ್ಯಂತ ಇಂದು ಮೂವತ್ತು ಕಡೆಗಳಲ್ಲಿ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದು, ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ದಾಳಿ ವೇಳೆ ಭಾರಿ ಅಕ್ರಮ ಆಸ್ತಿ ಮಾಡಿರುವುದು ಪತ್ತೆಯಾಗಿದೆ. ಏಳು ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ವಿವಿಧ ಕಡೆಗಳಲ್ಲಿ ಎಸಿಬಿ ದಾಳಿ ಮಾಡಿದೆ.
ಬೆಂಗಳೂರು ನಗರ, ಬಳ್ಳಾರಿ, ಕೋಲಾರ, ಧಾರವಾಡ, ದಕ್ಷಿಣ ಕನ್ನಡ, ಚಿತ್ರದುರ್ಗ ಹಾಗೂ ಬೀದರ್ನಲ್ಲಿ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ವಾಣಿಜ್ಯ ನಗರಿ ಹುಬ್ಬಳ್ಳಿಯ ನೀರಾವರಿ ಇಲಾಖೆಯ ಎಕ್ಸಿಕ್ಯುಟಿವ್ ಇಂಜಿನಿಯರ್ ದೇವರಾಜ್ ಕಲ್ಲೇಶ್, ಬೆಂಗಳೂರು ವಲಯದ ಸಹಕಾರ ಸಂಘಗಳ ಜಂಟಿ ನಿಂಬಂಧಕ ಡಿ. ಪಾಂಡುರಂಗ ಗರಗ್, ಮಂಗಳೂರಿನ ಪಾಲಿಕೆ ಟೌನ್ ಪ್ಲಾನಿಂಗ್ ಆಫೀಸರ್ ಜಯರಾಜ್, ಕೋಲಾರದ ಡಿಹೆಚ್ಓ ಡಾ. ವಿಜಯ್ ಕುಮಾರ್, ಧಾರವಾಡದ ಅರಣ್ಯ ಇಲಾಖೆಯ ಅಧಿಕಾರಿ ಶ್ರೀನಿವಾಸ್, ಕಲಬುರಗಿ ನಿವಾಸಿ, ಬೆಂಗಳೂರಿನ ಮಾಗಡಿಯಲ್ಲಿರುವ ಲೋಕೋಪಯೋಗಿ ಇಲಾಖೆ ಜೂನಿಯರ್ ಇಂಜನಿಯರ್ ಚನ್ನಬಸಪ್ಪ ಅವಟೆ ಮತ್ತು ಕೊಪ್ಪಳದ ಕಿಮ್ಸ್ನ ಫಾರ್ಮಾಕಾಲಜಿಕಲ್ ಎಚ್ಒಡಿ ಶ್ರೀನಿವಾಸ್ ಎಂಬುವರಿಗೆ ಸಂಬಂಧಿಸಿದ ವಿವಿಧ ಕಡೆಗಳಲ್ಲಿ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಒದಿರಿ: ಪೋಲಿಯೋ ಡ್ರಾಪ್ಸ್ ಬದಲು ಸ್ಯಾನಿಟೈಸರ್: ಕಂದಮ್ಮಗಳ ಪ್ರಾಣದ ಜತೆ ಆರೋಗ್ಯ ಸಿಬ್ಬಂದಿ ಚೆಲ್ಲಾಟ
ಪಾಂಡುರಂಗ ಮನೆಯಲ್ಲಿ ಕೈ ಇಟ್ಟಲ್ಲೆಲ್ಲಾ ವೈಭೋಗ
ಬೆಂಗಳೂರು ವಲಯದ ಸಹಕಾರ ಸಂಘಗಳ ಜಂಟಿ ನಿಂಬಂಧಕ ಡಿ. ಪಾಂಡುರಂಗ ಗರಗ್ ಅವರ ವಿಜಯನಗರ ಮನೆಯಲ್ಲಿ ಶೋಧ ಕಾರ್ಯ ಚುರುಕುಗೊಂಡಿದ್ದು, ಮನೆಯಲ್ಲಿ ಯಾವುದೇ ಡ್ರಾಯರ್ ತೆಗೆದರು ಕಂತೆ ಕಂತೆ ಹಣ ಸಿಗುತ್ತಿವೆಯಂತೆ. ಸಲ್ಲದೆ, ತಿಜೋರಿಯಲ್ಲಿ ರಾಶಿ-ರಾಶಿ ಚಿನ್ನಾಭರಣ ಸಹ ಸಿಕ್ಕಿದೆ ಎಂದು ತಿಳಿದುಬಂದಿದೆ.
ಡ್ರಾಯರ್ನಲ್ಲಿ ಅನೇಕ ಬ್ಯಾಂಕ್ ಪಾಸ್ ಬುಕ್ಗಳು ಸಹ ಇದ್ದು, ಸದ್ಯಕ್ಕೆ ಕೆಲ ಬ್ಯಾಂಕ್ ದಾಖಲಾತಿಗಳನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ದಾಖಲೆಗಳಲ್ಲಿರುವ ಆಸ್ತಿ ದಾಖಲಾತಿಗಳ ಪರಿಶೀಲನೆ ನಡೆಸುತ್ತಿದ್ದು, ಆದಾಯಕ್ಕೂ, ಮನೆಯಲ್ಲಿ ಸಿಕ್ಕ ಆಸ್ತಿಗೂ ಹೋಲಿಕೆಯಾಗದಿದ್ದರೇ ಅಧಿಕಾರಿಗಳಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿಯಾಗಿದೆ. ವಿಜಯನಗರದ ಮನೆ ಮಾತ್ರವಲ್ಲದೆ, ಜಯನಗರದ ಫ್ಲಾಟ್, ಮಲ್ಲೇಶ್ವರಂ ಕಚೇರಿ ಹಾಗೂ ಚಿತ್ರದುರ್ಗದ ಮನೆ ಸೇರಿ ಐದು ಕಡೆ ದಾಳಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ಶಾಕ್: ಏಕಕಾಲದಲ್ಲಿ ವಿವಿಧ ಸ್ಥಳಗಳಲ್ಲಿ ದಾಳಿ, ದಾಖಲೆ ಪರಿಶೀಲನೆ