ಕೋಲಾರ: ಆರೋಗ್ಯಕರ ಸಮಾಜ ನಿರ್ಮಾಣದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದ್ದು, ಇದಕ್ಕೆ ಪೂರಕವಾಗಿ ನಾಗರಿಕರು ಸಮಾಜದ ಮೇಲೆ ದುಷ್ಪಪರಿಣಾಮ ಬೀರುವ ಚುಟವಟಿಕೆಗಳಿಂದ ದೂರವಿರಬೇಕು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಹೇಳಿದರು.
ಪೊಲೀಸ್ ಇಲಾಖೆ ಸುವರ್ಣ ಸಂಭ್ರಮ ಪ್ರಯುಕ್ತ ನಗರದಲ್ಲಿ ಭಾನುವಾರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಐದು ಕಿ.ಮೀ. ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಲಾಖೆ ಕಾರ್ಯ ಒತ್ತಡದಲ್ಲಿರುವ ನೌಕರರು ಅಗ್ಗಾಗ ಇಲಾಖೆಯಿಂದ ಆಯೋಜನೆ ಮಾಡುವ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಾಗಲೇ ಒತ್ತಡಗಳಿಂದ ಮುಕ್ತರಾಗಬಹುದು. ಜತೆಗೆ ಪರಸ್ಪರ ಸೌಹಾರ್ದವವನ್ನೂ ಬೆಳೆಸಿಕೊಳ್ಳಬಹುದು ಎಂದರು.
ಮಾನಸಿಕ ಹಾಗೂ ದೈಹಿಕ ಅರೋಗ್ಯದ ಸದೃಢತೆಗಾಗಿ ಕ್ರೀಡೆಗಳಲ್ಲಿ ಓಟ ಪ್ರಮುಖವಾಗಿದ್ದು, ದಿನನಿತ್ಯದ ಜೀವನದಲ್ಲಿ ಓಡಾಟದ ಅಭ್ಯಾಸ ರೂಢಿಸಿಕೊಳ್ಳುವ ಮೂಲಕ ಆರೋಗ್ಯಕರ ಸಮಾಜ ನಿಮಾರ್ಣಕ್ಕೆ ಎಲ್ಲರು ಕೈ ಜೋಡಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಮಾತನಾಡಿ, ಪೊಲೀಸ್ ಇಲಾಖೆ ಸುವರ್ಣ ಮಹೋತ್ಸವದ ಅಂಗವಾಗಿ 5 ಕಿ.ಮೀ. ಮ್ಯಾರಥಾನ್ ಓಟವನ್ನು ರಾಜ್ಯಾದ್ಯಂತ ಆಯೋಜಿಸಲಾಗಿದ್ದು, ವಿಜೇತರಿಗೆ ಪ್ರಥಮ ಮತ್ತು ದ್ವೀತಿಯ ಬಹುಮಾನ 2 ಸಾವಿರ ರೂ. ತೃತೀಯ ಬಹುಮಾನ 1 ಸಾವಿರ ರೂ. ಹಾಗೂ ಪದಕ ವಿತರಿಸಲಾಗುವುದು. ಪುರುಷ ಮತ್ತು ಮಹಿಳಾ ವಿಭಾಗಕ್ಕೆ ಪ್ರತ್ಯೇಕ ಬಹುಮಾನಗಳಿವೆ ಎಂದರು.
ಯುವಕರು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಸಮಸಮಾಜ ನಿರ್ಮಾಣಕ್ಕಾಗಿ ಕೊಡುಗೆ ನೀಡಬೇಕು. ಅದನ್ನು ಬಿಟ್ಟು ದುಶ್ಚಟಗಳಿಗೆ ದಾಸರಾಗಿ, ಭವಿಷ್ಯ ಹಾಳು ಮಾಡಿಕೊಳ್ಳಬಾರದು ಎಂದರು.
ಪೊಲೀಸ್ ಕವಾಯತು ಮೈದಾನದಿಂದ ಆರಂಭಗೊಂಡ ಓಟವು ಮೆಕ್ಕೆ ವೃತ್ತ, ಹಳೆ ಬಸ್ ನಿಲ್ದಾಣ, ಬಂಗಾರಪೇಟೆ ವೃತ್ತ, ಕ್ಲಾಕ್ ಟವರ್, ಬಸ್ ನಿಲ್ದಾಣದ ವೃತ್ತ, ಅಮ್ಮಾವಾರಿ ಪೇಟೆ ವೃತ್ತ ಮಾರ್ಗವಾಗಿ ಸಾಗಿ, ವಾಪಸ್ ಕವಾಯಿತು ಮೈದಾನದಲ್ಲಿ ಅಂತ್ಯಗೊಂಡಿತು.
ಚಲನಚಿತ್ರ ನಟಿ ಕಾರುಣ್ಯರಾಮ್, ಮನುಷ ಭಟ್ ಅವರಿಂದ ಮ್ಯೂಸಿಕ್ ವಾರ್ಮಾಪ್ ಮಾಡಿಸಿ, ಮ್ಯಾರಥಾನ್ಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಲಾಯಿತು.
ವಿಜೇತರು
ಪುರುಷ ವಿಭಾಗ: ಪ್ರಥಮ ಬಹುಮಾನ ವಿನೋದ್ ಕುಮಾರ್, ದ್ವೀತಿಯ ಬಹುಮಾನ ಸಿದ್ಧಾರ್ಥ, ತೃತೀಯ ಬಹುಮಾನ ಈಶ್ವರ್ ಪಡೆದುಕೊಂಡರು.
ಮಹಿಳಾ ವಿಭಾಗ: ಪ್ರಥಮ ಬುಮಾನ ಅಂಜಲಿ, ದ್ವೀತಿಯ ಬಹುಮಾನ ವೆನ್ನೆಲಾ, ತೃತೀಯ ಬಹುಮಾನ ಎಸ್.ಹರ್ಷಿತಾ ಪಡೆದುಕೊಂಡರು.