ಬಾಲಿವುಡ್ನ ಟಾಪ್ ಐದು ಸೂಪರ್ಸ್ಟಾರ್ಗಳಲ್ಲಿ ಆಮಿರ್ ಖಾನ್, ಅಕ್ಷಯ್ ಕುಮಾರ್ ಕೂಡ ಇದ್ದಾರೆ. ಆದರೆ ಇಂತಹ ದೊಡ್ಡ ಸ್ಟಾರ್ಗಳಿಗೂ ಪ್ರೇಕ್ಷಕರು ಬಾಯ್ಕಾಟ್ ಬಿಸಿ ಮುಟ್ಟಿಸಿದ್ದಾರೆ. ಹೌದು, ಆಮಿರ್ ಖಾನ್ ಮತ್ತು ಕರೀನಾ ಕಪೂರ್ ಖಾನ್ರ ಹಿಂದು ವಿರೋಧಿ ಹೇಳಿಕೆಗಳು “ಲಾಲ್ ಸಿಂಗ್ ಛಡ್ಡಾ’ ಚಿತ್ರಕ್ಕೆ ಮಾರಕವಾಗಿವೆ. ಮತ್ತೊಂದೆಡೆ ಅಕ್ಷಯ್ ಕುಮಾರ್ ಮತ್ತು “ರಕ್ಷಾಬಂಧನ್ ‘ ಕಥೆಗಾರ್ತಿ ಕನ್ನಿಕಾ ಧಿಲ್ಲೋನ್ರ ಈ ಹಿಂದಿನ ಹೇಳಿಕೆಗಳೂ ಅವರ ಚಿತ್ರಕ್ಕೆ ಮೈನಸ್ ಆಗಿವೆ. ಇದೇ ಆಗಸ್ಟ್ 11ರಂದು ಎರಡೂ ಚಿತ್ರಗಳು ತೆರೆಗೆ ಬಂದಿದ್ದು, ಅತ್ತ ಆಮಿರ್, ಇತ್ತ ಅಕ್ಷಯ್ ಇಬ್ಬರಿಗೂ ಬಾಯ್ಕಾಟ್ ಬಿಸಿ ಮುಟ್ಟಿದೆ.
“ಲಾಲ್..’ ಚಿತ್ರದ ಮೊದಲ ದಿನ ಚಿತ್ರದ ಕಲೆಕ್ಷನ್ ಕೇವಲ 12 ಕೋಟಿ ರೂ. ಎನ್ನಲಾಗಿದೆ. ಕಳೆದ 13 ವರ್ಷಗಳಲ್ಲಿ ಆಮಿರ್ ಚಿತ್ರಕ್ಕೆ ಸಿಕ್ಕ ಅತಿ ಕಡಿಮೆ ಸ್ಟ್ ಡೇ ಗಳಿಕೆ. ಮೊದಲ ದಿನ ನೂರಾರು ಥಿಯೇಟರ್ಗಳಲ್ಲಿ ಎರಡಂಕಿಯೂ ಪ್ರೇಕ್ಷಕರು ಬಂದಿಲ್ಲ. ಹೀಗಾಗಿ ಥಿಯೇಟರ್ ಮಾಲೀಕರು 10 ಸಾವಿರ ಶೋಗಳಲ್ಲಿ ಬರೋಬ್ಬರಿ 1300 ಶೋಗಳನ್ನು ಎರಡನೇ ದಿನವೇ ಕ್ಯಾನ್ಸಲ್ ಮಾಡಿದ್ದಾರೆ. ಹಾಗೆಯೇ ಅಕ್ಷಯ್ ಕುಮಾರ್ರ “ರಕ್ಷಾಬಂಧನ್ ಸಹ ಮೊದಲ ದಿನ ಕೇವಲ 8.50 ಕೋಟಿ ರೂ. ಗಳಿಸಿದ್ದು, “ಸಾಮ್ರಾಟ್ ಪೃಥ್ವಿರಾಜ್’ ನಂತರ ಮತ್ತೊಂದು ಫ್ಲಾಪ್ನತ್ತ ಅವರು ಮುಖ ಮಾಡಿದ್ದಾರೆ ಎನ್ನಲಾಗಿದೆ.
ಈ ಎರಡೂ ಚಿತ್ರಗಳು ಬಾಯ್ಕಾಟ್ ಆಗಲು ಕಾರಣ
“ಲಾಲ್ ಸಿಂಗ್ ಛಡ್ಡಾ’ ಚಿತ್ರ ಬಾಯ್ಕಾಟ್ ಆಗುವುದಕ್ಕೆ ಪ್ರಮುಖ ಕಾರಣ ಆಮಿರ್ ಅವರ ಈ ಹಿಂದಿನ ಹಿಂದೂ ವಿರೋಧಿ ಹೇಳಿಕೆಗಳು ಎಂದು ಹೇಳಲಾಗುತ್ತಿದೆ. ಈ ಹಿಂದೆ ಆಮಿರ್, ಭಾರತದಲ್ಲಿ ಅಸುರಕ್ಷತೆ ಕಾಡುತ್ತಿದ್ದು, ವಿದೇಶಕ್ಕೆ ಹೋಗುವ ಕುರಿತಾಗಿ ಹೇಳಿಕೆ ನೀಡಿದ್ದರು. ಹಾಗೆಯೇ, “ಪಿಕೆ’ ಚಿತ್ರದಲ್ಲಿ ಹಿಂದು ಧರ್ಮ, ದೇವರ ಅವಹೇಳನ ಮಾಡಿದ್ದ ಅವರು ಬೇರೆ ಧರ್ಮಗಳ ಬಗ್ಗೆ ಮೃದುಧೋರಣೆ ವಹಿಸಿದ್ದರು. ಅಷ್ಟೇ ಅಲ್ಲದೇ “ಲಾಲ್ ಸಿಂಗ್’ ಚಿತ್ರದಲ್ಲೂ “ದೇವರ ಪೂಜೆ, ಪಾಠ ಮಾಡೋದರಿಂದ ಮಲೇರಿಯಾ ಬರುತ್ತೆ ಅಂತ ಅಮ್ಮ ಹೇಳಿದ್ದಾರೆ’ ಎಂಬ ಡೈಲಾಗ್ ಕೂಡ ಇದೆ. ಇನ್ನು ನಾಯಕಿ ಕರೀನಾ ಕಪೂರ್ ಖಾನ್ ಮತ್ತು ಚಿತ್ರಕ್ಕೆ ಕಥೆ ಬರೆದಿರುವ ಅತುಲ್ ಕುಲಕರ್ಣಿ ಅವರು ನೀಡಿದ್ದ ಹೇಳಿಕೆಗಳು ಸಹ ಚಿತ್ರದ ಮೇಲೆ ಪರಿಣಾಮ ಬೀರಿದೆ.
“ರಕ್ಷಾಬಂಧನ್ ‘ ಟಾರ್ಗೆಟ್ ಆಗಲು ಕಾರಣ
ಇನ್ನು ನಟ ಅಕ್ಷಯ್ ಕುಮಾರ್ ಅವರು ಸಹ ಸಿನಿಮಾ ಪ್ರಚಾರದ ಸಮಯದಲ್ಲಿ ದೇವಸ್ಥಾನಗಳಿಗೆ ಭೇಟಿ ಕೊಟ್ಟಿದ್ದರೂ, ಕೆಲವು ಸಂದರ್ಶನದಲ್ಲಿ ಧಾರ್ಮಿಕ ಆಚರಣೆಗಳ ಬಗ್ಗೆ ವ್ಯಂಗ್ಯವಾಡಿದ್ದರು. ಹಾಗೇ “ರಕ್ಷಾಬಂಧನ್ ‘ ಚಿತ್ರದ ಕಥೆಗಾರ್ತಿ ಕನ್ನಿಕಾ ಧಿಲ್ಲೋನ್ ಸಹ ಹಲವು ಬಾರಿ ಹಿಂದುವಿರೋಧಿ ಟ್ವೀಟ್ಗಳನ್ನು ಮಾಡಿದ್ದು, ಅವೆಲ್ಲವೂ ಈಗ ಮತ್ತೆ ವೈರಲ್ ಆಗಿವೆ. ಹೀಗಾಗಿ ಆ ಚಿತ್ರವನ್ನೂ ಹಲವೆಡೆ ಬಾಯ್ಕಾಟ್ ಮಾಡಲಾಗಿದೆ.