ಪ್ರಯಾಗ್ರಾಜ್: ಉತ್ತರಪ್ರದೇಶದಲ್ಲಿ ಒಂದಾದ ಮೇಲೊಂದರಂತೆ ಅತ್ಯಾಚಾರ ಪ್ರಕರಣ ಬೆಳಕಿಗೆ ಬರುತ್ತಿದ್ದು, ಇದೀಗ ಅತ್ಯಾಚಾರ ಆರೋಪದ ಮೇಲೆ ಅಲ್ಲಿನ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷನನ್ನೇ ಪೊಲೀಸರು ಬಂಧಿಸಿದ್ದಾರೆ.
ವಾರಾಣಸಿ ಘಟಕದ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಶ್ಯಾಂ ಪ್ರಕಾಶ್ ದ್ವಿವೇದಿ ಬಂಧಿತ. ದೂರು ದಾಖಲಾಗುತ್ತಿದ್ದಂತೆ ಈತ ತಲೆಮರೆಸಿಕೊಂಡಿದ್ದ. ಮತ್ತೊಬ್ಬ ಆರೋಪಿ ಅನಿಲ್ ದ್ವಿವೇದಿಯನ್ನು ವಾರದ ಹಿಂದೆಯೇ ಬಂಧಿಸಲಾಗಿದೆ.
ಶ್ಯಾಂ ಪ್ರಕಾಶ್ ಹಾಗೂ ಅನಿಲ್ ಇಬ್ಬರೂ ನನ್ನ ತಲೆಗೆ ಬಂದೂಕು ಗುರಿ ಇಟ್ಟು ಗ್ಯಾಂಗ್ ರೇಪ್ ಮಾಡಿದ್ದರು ಎಂದು ಬಿಎ ವಿದ್ಯಾರ್ಥಿನಿಯೊಬ್ಬಳು ಹದಿನೈದು ದಿನಗಳ ಹಿಂದೆ ದೂರು ನೀಡಿದ್ದಳು. ಮಾರ್ಚ್ನಲ್ಲಿ ಇಬ್ಬರೂ ಮನೆಗೆ ನುಗ್ಗಿ ಅತ್ಯಾಚಾರ ಎಸಗಿದ್ದರು. ಮನೆಯವರು ಘಟನೆಯಿಂದ ಭಯಭೀತರಾಗಿ ದೂರು ಕೊಡದಂತೆ ಹೇಳಿದ್ದರು ಎಂದೂ ಯುವತಿ ಹೇಳಿದ್ದಾಳೆ. ಆಕೆಯ ವೈದ್ಯಕೀಯ ತಪಾಸಣೆ ನಡೆಸಿ, ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)