ತುಮಕೂರು: ಅಭ್ಯರ್ಥಿ ಆಗಿ ಮನೆಗೆ ಬಂದವರು ಇನ್ನೇನು ಕಡ್ಲೇಪುರಿ ತಿಂದೋಗಲಿಕ್ಕೆ ಬರುತ್ತಾರಾ?ಹೀಗೆಂದವರು ಬಿಜೆಪಿ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ !
ಚಿಕ್ಕನಾಯಕನಹಳ್ಳಿ ಜೆ.ಸಿ.ಪುರದ ತಮ್ಮ ನಿವಾಸಕ್ಕೆ ಭಾನುವಾರ ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಭೇಟಿ ಕುರಿತು ಪ್ರತಿಕ್ರಿಯಿಸಿದ ಮಾಧುಸ್ವಾಮಿ, ಚುನಾವಣೆಯಲ್ಲಿ ಸ್ಪರ್ಧಿಸಿರುವರು ಮನೆಗೆ ಬಂದಾಗ ಸಪೋರ್ಟ್ ಕೇಳ್ತಾರೆ. ಬೇರೆ ಪಕ್ಷದಲ್ಲಿರುವರು ನಾವು ಬೆಂಬಲ ಕೊಡಲಿಕ್ಕೆ ಸಾಧ್ಯವಾ ಎಂದು ಪ್ರಶ್ನಿಸಿದರು.
ನಾನು, ಮುದ್ದಹನುಮೇಗೌಡ ಇಬ್ಬರು ಬಹಳ ಹಳೆಯ ಸ್ನೇಹಿತರು. ಇಬ್ಬರು ಒಟ್ಟಿಗೆ ಶಾಸಕರಾಗಿದ್ದರು. ಅಭ್ಯರ್ಥಿ ಆಗಿ ಮನೆಗೆ ಸ್ನೇಹಿತರು ಬಂದಾಗ ಅದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಇದೊಂದು ಸೌಜನ್ಯ ಭೇಟಿ. ಈ ಭೇಟಿಯ ಬಗ್ಗೆ ಮಾಧ್ಯಮಗಳು ಅಷ್ಟೊಂದು ಮಹತ್ವ ಕೊಡುವ ಅಗತ್ಯವು ಇಲ್ಲ, ಸುದ್ದಿ ಮಾಡುವುದು ಸರಿಯಲ್ಲ ಎಂದರು.
ಸೀನಿಯರ್ ಮೋಸ್ಟ್ ಲೀಡರ್ !: ಹೂಗುಚ್ಛ ನೀಡಲು ಬಂದ ಮುದ್ದಹನುಮೇಗೌಡರಿಗೆ ನಯವಾಗೇ ಇದೆಲ್ಲಾ ನನಗೇಕೆ ತಂದಿದ್ದೀರಾ ಎಂದ ಮಾಧುಸ್ವಾಮಿ ಅವರನ್ನು ಕುರಿತು ‘ಒಂದು ಮಾತು ಹೇಳಲಾ ಸಾರ್… ನೀವು ‘ರಾಜ್ಯದ ಹಿರಿಯ ನಾಯಕರಲ್ಲೊಬ್ಬರು’ (ಸೀನಿಯರ್ ಮೋಸ್ಟ್ ಲೀಡರ್), ಇದರಲ್ಲಿ ಗೌರವ ತೋರುವ ಉದ್ದೇಶವಷ್ಟೇ ಇದೆ. ಬೇರೆ ಇನ್ನೇನು ನಿಮ್ಮ ಬಳಿ ಬಯಸುವುದಿಲ್ಲ ಎನ್ನುವ ಸ್ಪಷ್ಟನೆಯನ್ನು ಎಸ್ಪಿಎಂ ಕೊಟ್ಟರು.