ಭರಮಸಾಗರ: ಗ್ರಾಮೀಣರ ಧಾರ್ಮಿಕ ಭಕ್ತಿಯ ಪ್ರತೀಕವಾದ ದೇಗುಲಗಳ ಜೀರ್ಣೋದ್ಧಾರಕ್ಕೆ ಸರ್ಕಾರ ನೆರವು ನೀಡುತ್ತದೆ. ಇದು ಸಾಕಾರಗೊಳ್ಳಲು ಭಕ್ತರ ಸಹಭಾಗಿತ್ವವೂ ಅಗತ್ಯ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.
ಹೋಬಳಿಯ ಕೊಳಹಾಳು ಗ್ರಾಮಕ್ಕೆ ಭಾನುವಾರ ಭೇಟಿ ನೀಡಿ ನಿರ್ಮಾಣ ಹಂತದಲ್ಲಿರುವ ಶ್ರೀ ಬಸವಣ್ಣ ದೇವಸ್ಥಾನದ ಕಾಮಗಾರಿ ವೀಕ್ಷಿಸಿ ಮಾತನಾಡಿದರು.
ಈ ವೇಳೆ ದೇವಸ್ಥಾನಕ್ಕೆ ಆರ್ಥಿಕ ನೆರವು ನೀಡಬೇಕೆಂಬ ಗ್ರಾಮಸ್ಥರ ಮನವಿ ಸ್ಪಂದಿಸಿದ ಶಾಸಕರು, ಸ್ಥಳದಲ್ಲೇ 10 ಲಕ್ಷ ರೂ. ಅನುದಾನ ನೀಡುವುದಾಗಿ ಘೋಷಿಸಿದರು. ಕೇವಲ ಸರ್ಕಾರದ ಅನುದಾನದಿಂದಲೇ ದೇಗುಲ ಕಟ್ಟಬಾರದು. ಇದಕ್ಕೆ ಭಕ್ತರು ಕೈಲಾದ ಸಹಾಯ ಮಾಡುವುದರ ಮೂಲಕ ಭಕ್ತಿ ಮೆರೆಯಬೇಕು ಎಂದರು.
ಇದೇ ವೇಳೆ ಹೋಬಳಿಯ ವಿವಿಧ ದೇವಸ್ಥಾನ, ಸಮುದಾಯ ಭವನ ಹಾಗೂ ಶಾಲಾ ಕಟ್ಟಡಗಳಿಗೆ ಅನುದಾನ ನೀಡುವುದಾಗಿ ತಿಳಿಸಿದರು.
ಜಿಪಂ ಸದಸ್ಯ ಡಿ.ವಿ. ಶರಣಪ್ಪ, ತಾಪಂ ಸದಸ್ಯರಾದ ನಾಗೇಂದ್ರಪ್ಪ, ಕಲ್ಲೇಶ್, ಸಾಮಿಲ್ ಶಿವಣ್ಣ, ಬಿಜೆಪಿ ಮಂಡಲ ಅಧ್ಯಕ್ಷ ಶೈಲೇಶ್ ಕುಮಾರ್, ಕೊಳಹಾಳು ಶರಣಪ್ಪ, ಪಿಎಸ್ಐ ರಾಜು, ತಾಪಂ ಇಒ ಕೃಷ್ಣಾನಾಯಕ್, ಗ್ರಾಪಂ, ಕಂದಾಯ ಇಲಾಖೆ ಅಧಿಕಾರಿಗಳಿದ್ದರು.