ಭಾಲ್ಕಿ: ಮನುಷ್ಯ ನಿಜತತ್ವ ಅರಿತು ಬಾಳಬೇಕು. ಭಾರತೀಯ ಪರಂಪರೆಯಲ್ಲಿ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ಮಹತ್ವವಿದೆ. ಅಸತ್ಯದಿಂದ ಸತ್ಯದ ಕಡೆ ನಡೆಯುವುದೇ ದೀಪಾವಳಿ ಹಬ್ಬವಾಗಿದೆ ಎಂದು ಶಿವಣಿ ಮತ್ತು ಹಲಬರ್ಗಾ ಮಠದ ಶ್ರೀ ಹಾವಗಿಲಿಂಗೇಶ್ವರ ಶಿವಾಚಾರ್ಯರು ನುಡಿದರು.
ಪಟ್ಟಣದ ನಿರ್ಮಲಾ ಕ್ರಿಯೇಟಿವ್ ಸ್ಟಡೀಸ್ ಕಾಲೇಜಿನಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಅಸತೋಮ ಸದ್ಗಮಯ ಅನ್ನುವಂತೆ ನಾವು ಅಸತ್ಯದಿಂದ ಸತ್ಯದ ಕಡೆ ಸಾಗಬೇಕಿದೆ. ಸತ್ಯದಲ್ಲಿಯೇ ಜಗತ್ತನ್ನು ಗೆಲ್ಲುವ ಶಕ್ತಿ ಇದೆ. ತಮಸೋಮ ಜೋತಿರ್ಗಮಯ ಎನ್ನುವಂತೆ ನಮ್ಮಲ್ಲಿನ ಕತ್ತಲೆ ದೂರ ಮಾಡಲು ಬೆಳಕು ಬೇಕು. ನಮ್ಮಲ್ಲಿರುವ ಅಜ್ಞಾನವೆಂಬ ಕತ್ತಲೆ ಕಳೆಯಬೇಕಾದರೆ ಜ್ಞಾನಜ್ಯೋತಿ ಪ್ರಜ್ವಲಿಸಬೇಕು. ಬದುಕಿನ ಸಾರ್ಥಕತೆಗೆ ಜ್ಞಾನದ ಜ್ಯೋತಿ ಬೆಳಗಿಸಬೇಕಿದೆ. ಅದಕ್ಕಾಗಿ ನಾವೆಲ್ಲರೂ ಉತ್ತಮ ಶಿಕ್ಷಣ ಪಡೆದು ಜ್ಞಾನವಂತರಾಗಿ ಜಗಜ್ಯೋತಿಯಾಗಿ ಬಾಳುವಂತಾಗಬೇಕು ಎಂದು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಮಲ್ಲಿಕಾರ್ಜುನ ಹಲಮಂಡಗೆ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರಾಜೆಪ್ಪ ಪಾಟೀಲ್ ಮತ್ತು ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಯರಾಜ ದಾಬಶೆಟ್ಟಿ ಮಾತನಾಡಿದರು. ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಮರ ಹಲಮಂಡಗೆ ಪ್ರಾಸ್ತಾವಿಕ ಮಾತನಾಡಿದರು.
ಸಿಆರ್ಪಿ ಚನ್ನಪ್ಪ, ಎಬಿವಿಪಿ ಮುಖಂಡ ಈಶ್ವರ ರುಮ್ಮಾ, ಮುಖ್ಯ ಶಿಕ್ಷಕ ಜಾಲಿಂದರ ಮೇತ್ರೆ ಇದ್ದರು. ಉಪನ್ಯಾಸಕ ಶಿವಕುಮಾರ ಕಾಂಜೋಳಗೆ ನಿರೂಪಣೆ ಮಾಡಿದರು. ಶಿಕ್ಷಣ ಸಂಸ್ಥೆಯ ಪುಟಾಣಿ ಮಕ್ಕಳು ಸಂಪೂರ್ಣ ರಾಮಾಯಣ ದರ್ಶನ ನಾಟಕ ಪ್ರದರ್ಶಿಸಿ ಗಮನ ಸೆಳೆದರು.