ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಸಿರು ನಿಶಾನೆ ತೋರಿಸಿದ್ದಾರೆ. ಸಿಎಂ ಅವರಿಂದ ಸ್ಮಾರ್ಟ್ ಕಾರ್ಡ್ ಪಡೆದ ಮೊದಲ ಮಹಿಳೆ ಯಾರು ಎನ್ನುವ ಪ್ರಶ್ನೆಗೂ ಉತ್ತರ ಸಿಕ್ಕಾಗಿದೆ.
ಕಾಂಗ್ರೆಸ್ನ ಮೊದಲ ಗ್ಯಾರಂಟಿಯಾಗಿ ಶಕ್ತಿ ಯೋಜನೆ (ಸಾರಿಗೆ ಇಲಾಖೆಯ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ)ಗೆ ಇಂದು ಚಾಲನೆ ನೀಡಲಾಯಿತು. ಈ ವೇಳೆ ಅಧಿಕೃತವಾಗಿ ಐವರು ಮಹಿಳೆಯರಿಗೆ ಉಚಿತ ಪ್ರಯಾಣದ ಸ್ಮಾರ್ಟ್ ಕಾರ್ಡ್ ನೀಡಲಾಯಿತು. ಬೆಂಗಳೂರಿನ ಆರ್ ಟಿ ನಗರದ ನಿವಾಸಿ ಸುಮಿತ್ರಾ ಎಚ್. ಆರ್ ಅವರು ಮೊದಲ ಸ್ಮಾರ್ಟ್ ಕಾರ್ಡ್ ಪಡೆದ ಮಹಿಳೆ ಎಂಬ ಖ್ಯಾತಿಗೆ ಒಳಗಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ 23 ದಿನಗಳಲ್ಲಿಯೇ ಮೊದಲ ಭರವಸೆ ಅನುಷ್ಠಾನಗೊಂಡಿದೆ.
ಸರ್ಕಾರಿ ಬಸ್ನಲ್ಲಿ ಉಚಿತ ಪ್ರಯಾಣ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಮೊದಲ ಟಿಕೆಟ್ ಪಡೆದು ಗಮನ ಸೆಳೆದರು. ಟಿಕೆಟ್ ಪ್ರದರ್ಶಿಸಿ ಖುಷಿ ವ್ಯಕ್ತಪಡಿಸಿದರು. ನಂತರ ಎರಡನೇ ಟಿಕೆಟ್ನ್ನು ಕಾಂಗ್ರೆಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಪಡೆದುಕೊಂಡರು.
ಮೊದಲ ಸ್ಮಾರ್ಟ್ ಕಾರ್ಡ್ ಪಡೆದ ಮಹಿಳೆ ಹೇಳೆ ಮಾತನಾಡಿ, ನಾನು ಬೆಂಗಳೂರಿನ ನಿವಾಸಿ ಆಗಿದ್ದೇನೆ. ಸ್ಮಾರ್ಟ್ ಕಾರ್ಡ್ ಪಡೆದ ಮೊದಲ ಮಹಿಳೆ ಎಂಬುದು ನನ್ನ ಸಂತಸವಾಗಿದೆ. ಕಾರ್ಡ್ ಪಡೆದ ಮೊದಲನೇ ವ್ಯಕ್ತಿ ಅನ್ನೋದಕ್ಕೆ ಹೆಮ್ಮೆ ಆಗ್ತಿದೆ. ಸ್ಮಾರ್ಟ್ ಕಾರ್ಡ್ ಪಡೆಯಲು ಆಧಾರ್ ನೀಡಿದ್ದೆನು. ಮುಂದಿನ ದಿನಗಳಲ್ಲಿ ಎಲ್ಲರೂ ಒಳ್ಳೆಯ ರೀತಿಯಲ್ಲಿ ಕಾಂಗ್ರೆಸ್ ಸರ್ಕಾರದ ಈ ಯೋಜನೆಯ ಲಾಭ ಪಡೆದುಕೊಳ್ಳಿ ಎಂದು ಹೇಳಿದ್ದಾರೆ.
ಉಚಿತ ಪ್ರಯಾಣಕ್ಕಿರುವ ನಿಯಮ:
ಆಧಾರ್, ಪಾನ್ ಕಾರ್ಡ್ ಸೇರಿದಂತೆ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ತೋರಿಸಬೇಕು.
ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಸಾರಿಗೆಗಳಲ್ಲಿ ರಾಜ್ಯಾದ್ಯಂತ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ.
ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣಕ್ಕೆ ದೂರದ ಯಾವುದೇ ಮಿತಿಯಿಲ್ಲ.
ರಾಜ್ಯದೊಳಗಿನ ಪ್ರಯಾಣಕ್ಕೆ ಮಾತ್ರ (ಎಲ್ಲಾ ಅಂತರ ರಾಜ್ಯ ಸಾರಿಗೆ ಅನುಸೂಚಿಗಳನ್ನು ಹೊರತುಪಡಿಸಿ) ಈ ಯೋಜನೆ ಅನ್ವಯಿಸತಕ್ಕದ್ದು.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ಹೊರತುಪಡಿಸಿ, ಉಳಿದ ರಸ್ತೆ ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಎಲ್ಲ ಬಸ್ಗಳಲ್ಲಿ (ಅಂತರರಾಜ್ಯ, ಎ.ಸಿ. ಮತ್ತು ಐಷಾರಾಮಿ ಬಸ್ಗಳನ್ನು ಹೊರತುಪಡಿಸಿ) ಶೇ.50 ಆಸನಗಳನ್ನು ಪುರುಷರಿಗೆ ಕಾಯ್ದಿರಿಸತಕ್ಕದ್ದು.