ಆನೇಕಲ್: ಸಿಲಿಕಾನ್ ಸಿಟಿಯಲ್ಲಿ ಬ್ಯಾಕ್ ಟು ಬ್ಯಾಕ್ ಅಗ್ನಿ ದುರಂತಗಳು ಸಂಭವಿಸುತ್ತಿರುವುದು ಜನರನ್ನು ಆತಂಕಕ್ಕೆ ದೂಡಿದೆ. ದೇವರಚಿಕ್ಕನಹಳ್ಳಿಯಲ್ಲಿನ ಆಶ್ರಿತ್ ಆ್ಯಸ್ಪೈರ್ ಅಪಾರ್ಟ್ಮೆಂಟ್ ಅಗ್ನಿ ದುರಂತ ಮತ್ತು ನ್ಯೂ ತರಗುಪೇಟೆ ಬಳಿ ಶ್ರಿ ಮಹಾಕಾಳಿ ಅಮ್ಮನ್ ಲಾರಿ ಸರ್ವೀಸ್ ಗೋದಾಮಿನಲ್ಲಿ ಪಟಾಕಿ ಸ್ಫೋಟ ದುರಂತ ಮಾಸುವ ಮುನ್ನವೇ ನಗರದಲ್ಲಿ ಮತ್ತೊಂದು ಅವಘಡ ಸಂಭವಿಸಿದೆ.
ನಗರದ ಅತ್ತಿಬೆಲೆಯ ಕೈಗಾರಿಕಾ ಪ್ರದೇಶದಲ್ಲಿರುವ ಕೆಮಿಕಲ್ ಕಂಪನಿಯಲ್ಲಿ ಬಾಯ್ಲರ್ ಸ್ಫೋಟಗೊಂಡು ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೆಮಿಕಲ್ ಕಂಪನಿಯಲ್ಲಿ ಬಾಯ್ಲರ್ ಸ್ಫೋಟದಿಂದ ಗಾಳಿಯಲ್ಲಿ ಗಬ್ಬು ವಾಸನೆ ಉಂಟಾಗಿದ್ದು, ಕೆಮಿಕಲ್ ವಾಸನೆಗೆ ಹೆದರಿ ಜನರು ಫ್ಯಾಕ್ಟರಿ ಸಮೀಪಕ್ಕೆ ತೆರಳಲು ಹೆದರುತ್ತಿದ್ದಾರೆ.
ಬಾಯ್ಲರ್ ಸ್ಫೋಟದಿಂದ ಬೆಂಕಿ ಹೊತ್ತುಕೊಂಡಿದ್ದು, ಹರಸಾಹಸ ಮಾಡಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಇದೇ ಸಂದರ್ಭದಲ್ಲಿ ಕಂಪನಿಯ ಸಿಬ್ಬಂದಿ ಹಾಗೂ ಸ್ಥಳೀಯರು ಜೊತೆ ಮಾತಿನ ಚಕಮಕಿ ನಡೆಯಿತು. ಇತ್ತ ಒಂದು ಗಂಟೆಯಿಂದ ಅಗ್ನಿಶಾಮಕ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.
ಸ್ಥಳದಲ್ಲಿ ಕೆಮಿಕಲ್ ಫ್ಯಾಕ್ಟರಿಯಿಂದ ಗಬ್ಬುವಾಸನೆ ಬಿರುತ್ತಿದ್ದು, ಸ್ಥಳದಲ್ಲಿರುವ ಸ್ಥಳೀಯರು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ನಿನ್ನೆ ವಿವಿ ಪುರ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯೂ ತರಗುಪೇಟೆ ಬಳಿ ಶ್ರಿ ಮಹಾಕಾಳಿ ಅಮ್ಮನ್ ಲಾರಿ ಸರ್ವೀಸ್ ಗೋದಾಮಿನಲ್ಲಿ ಸಂಭವಿಸಿದ ಪಟಾಕಿ ಸ್ಫೋಟ ದುರಂತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಘಟನಾ ಸ್ಥಳವನ್ನ ಎಫ್ಎಸ್ಎಲ್ ತಂಡ ಪರಿಶೀಲನೆ ನಡೆಸಿದ್ದು, ಶ್ರಿ ಮಹಾಕಾಳಿ ಅಮ್ಮನ್ ಲಾರಿ ಸರ್ವೀಸ್ ಗೋದಾಮಿನಲ್ಲಿ 80 ಪಟಾಕಿ ಬಾಕ್ಸ್ಗಳು ಇದ್ದವು. ಈ ಪೈಕಿ 2 ಬಾಕ್ಸ್ ಸ್ಫೋಟಗೊಂಡಿದ್ದು, 78 ಬಾಕ್ಸ್ ಹಾಗೇ ಇವೆ. ಪ್ರತಿ ಬಾಕ್ಸ್ 15-20 ಕೆಜಿ ತೂಕ ಇದೆ. ಪಟಾಕಿ ಸ್ಫೋಟದಿಂದಲೇ ಈ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಘಟನೆ ಸಂಬಂಧ ಮಾಲೀಕ ಗಣೇಶ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಸ್ಫೋಟದ ರಭಸಕ್ಕೆ ದೇಹಗಳು ಛಿದ್ರವಾಗಿದ್ದು, ಸ್ಥಳೀಯರು ಭಯಭೀತರಾಗಿದ್ದರು.
ಕಳೆದ ಮಂಗಳವಾರ (ಸೆ.21) ದೇವರಚಿಕ್ಕನಹಳ್ಳಿಯ ಆಶ್ರಿತ್ ಆ್ಯಸ್ಪೈರ್ ಎಂಬ ಅಪಾರ್ಟ್ಮೆಂಟ್ನಲ್ಲಿ ಸಂಭವಿಸಿದ ಅಗ್ನಿ ಅವಘಡದದಲ್ಲಿ ತಾಯಿ ಹಾಗೂ ಪುತ್ರಿ ಸಜೀವ ದಹನವಾಗಿದ್ದಾರೆ. ಭೀಮಸೇನ ರಾವ್ ಎಂಬವರಿಗೆ ಸೇರಿದ್ದ ಎರಡು ಫ್ಲ್ಯಾಟ್ನಲ್ಲಿ ಒಂದರಲ್ಲಿ ಬೆಂಕಿ ಕಾಣಿಸಿಕೊಂಡು ಲಕ್ಷ್ಮೀದೇವಿ ಹಾಗೂ ಭಾಗ್ಯರೇಖಾ ಅವರು ಜೀವಂತ ಸುಟ್ಟುಹೋಗಿದ್ದರು. ಅದರಲ್ಲೂ ಬೆಂಕಿ ಕಾಣಿಸಿಕೊಂಡಾಗ ಅವರು ತಪ್ಪಿಸಿಕೊಳ್ಳಲು ಸಾಧ್ಯವೇ ಆಗದಿದ್ದುದು ಸಾವಿಗೆ ನಿಜವಾದ ಕಾರಣ ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್)
ಜೀವಂತ ಸುಟ್ಟುಹೋದಾಕೆಯ ಸಾವಿನ ಹಿಂದಿನ ಅಸಲಿ ಕಾರಣವೇ ಇದು!; ಅಪಾರ್ಟ್ಮೆಂಟ್ ಅಗ್ನಿ ಆಕಸ್ಮಿಕದ ಹಿಂದಿನ ದುರಂತ
ಬೆಂಗಳೂರಲ್ಲಿ ಪಟಾಕಿ ಸ್ಫೋಟ: ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ ಶಾಸಕ ಜಮೀರ್
ಬೆಂಗಳೂರಲ್ಲಿ ಮತ್ತೊಂದು ಬೆಂಕಿ ಅವಘಡ: ಛಿದ್ರಗೊಂಡ ದೇಹಗಳು, ಇಬ್ಬರು ದುರ್ಮರಣ