ಬಳ್ಳಾರಿ: ಜಿಲ್ಲೆಯಲ್ಲಿ ಲಾಕ್ಡೌನ್ ಅವಧಿಯಲ್ಲಿ ವಿವಿಧ ವ್ಯಾಪಾರಿ ಚಟುವಟಿಕೆಗಳಿಗೆ ಅವಕಾಶ ನೀಡಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಭಾನುವಾರ ಆದೇಶ ಹೊರಡಿಸಿದ್ದಾರೆ.
ಆಯುಷ್ ಸೇರಿ ಎಲ್ಲ ರೀತಿಯ ಆರೋಗ್ಯ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ರಸಗೊಬ್ಬರ, ಕ್ರಿಮಿನಾಶಕ ಹಾಗೂ ಬೀಜ ಮಾರಾಟ ಸೇರಿ ಕೃಷಿ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಮುಂದುವರಿಯಲಿವೆ. ಮೀನುಗಾರಿಕೆ, ಹೈನುಗಾರಿಕೆಗೆ ಸಂಬಂಧಿಸಿದ ಸಂಸ್ಕರಣೆ, ಮಾರಾಟಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ನೀರಾವರಿ ಹಾಗೂ ನೀರಿನ ಸಂರಕ್ಷಣೆಗೆ ಸಂಬಂಧಿಸಿದ ಕಾಮಗಾರಿಗೆ ಆದ್ಯತೆ ನೀಡಬೇಕೆಂದು ಸೂಚಿಸಲಾಗಿದೆ.
ಸಿಮೆಂಟ್, ಸ್ಟೀಲ್, ಜಲ್ಲಿ, ಟೈಲ್ಸ್, ಪೇಂಟ್ಸ್ ಸಾಗಣೆಗೆ ನಿರ್ಬಂಧ ಇಲ್ಲ. ದಿನಸಿ ಅಂಗಡಿಗಳು, ತರಕಾರಿ, ಹಣ್ಣು, ಹಾಲು, ಮಾಂಸದ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂಬ ಷರತ್ತಿನೊಂದಿಗೆ ಸಮಯದ ನಿರ್ಬಂಧವನ್ನು ತೆಗೆದು ಹಾಕಲಾಗಿದೆ. ಹೋಟೆಲ್, ಐಸ್ ಕ್ರೀಂ, ಜ್ಯೂಸ್ ಮಾರಾಟವನ್ನು ಪಾರ್ಸೆಲ್ಗೆ ಸೀಮಿತಗೊಳಿಸಲಾಗಿದೆ. ಕೊರಿಯರ್ ಸೇವೆಗೆ ಅವಕಾಶ ನೀಡಲಾಗಿದೆ. ಎಲೆಕ್ಟ್ರಿಷಿಯನ್, ಪ್ಲಂಬರ್, ಮೆಕಾನಿಕ್ಗಳು, ಕಾರ್ಪೆಂಟರ್ಗಳು ಕೆಲಸ ಮಾಡಬಹುದಾಗಿದೆ.
ಎಲೆಕ್ಟ್ರಿಕಲ್ ಅಂಗಡಿಗಳು, ಶೈಕ್ಷಣಿಕ ಪುಸ್ತಕ ಮಳಿಗೆಗಳು ತೆರೆಯಬಹುದಾಗಿದೆ. ರಸ್ತೆ ನಿರ್ಮಾಣ, ನೀರಾವರಿ ಯೋಜನೆ ಕಾಮಗಾರಿ ಕೈಗೊಳ್ಳಬಹುದಾಗಿದೆ. ಕೆಲಸದ ಸ್ಥಳಕ್ಕೆ ಹೋಗುವವರು ಕಡ್ಡಾಯವಾಗಿ ಪಾಸ್ ಹೊಂದಿರಬೇಕೆಂದು ಸೂಚಿಸಲಾಗಿದೆ. ಲಾಕ್ಡೌನ್ ಅವಧಿಯಲ್ಲಿ ಶೈಕ್ಷಣಿಕ ಸಂಸ್ಥೆಗಳು ಹಾಗೂ ಕೋಚಿಂಗ್ ಕೇಂದ್ರಗಳು ತೆರೆಯುವಂತಿಲ್ಲ. ಆಟೋ ಹಾಗೂ ಟ್ಯಾಕ್ಸಿ ಸಂಚಾರಗಳ ಮೇಲಿನ ನಿರ್ಬಂಧ ಮುಂದುವರಿಯಲಿದೆ. ಲಾಡ್ಜ್, ಚಿತ್ರಮಂದಿರ, ಶಾಪಿಂಗ್ ಕಾಂಪ್ಲೆಕ್ಸ್, ಜಿಮ್, ಸ್ವಿಮ್ಮಿಂಗ್ ಪೂಲ್ಗಳನ್ನು ತೆರೆಯುವಂತಿಲ್ಲ. ಎಲ್ಲ ರೀತಿಯ ಸಭೆ, ಸಮಾರಂಭಗಳ ನಿಷೇಧ ಮುಂದುವರಿಯಲಿದೆ. ಅಂತ್ಯಕ್ರಿಯೆಯಲ್ಲಿ 20ಕ್ಕಿಂತ ಹೆಚ್ಚು ಜನರು ಪಾಲ್ಗೊಳ್ಳುವಂತಿಲ್ಲ ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.