ನವದೆಹಲಿ: ಕೋವಿಡ್ 19 ಪಿಡುಗಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಲಾಕ್ಡೌನ್ ಘೋಷಿಸಿದೆ. ಈ ಕಾರಣ ಭಾರತೀಯ ರಿಸರ್ವ್ ಬ್ಯಾಂಕ್, ಗೃಹ ಮತ್ತು ವಾಹನದ ಸಾಲದ ಮೂರು ತಿಂಗಳ ಮಾಸಿಕ ಕಂತಿನ ಪಾವತಿಗೆ ವಿನಾಯ್ತಿ ನೀಡಿರುವುದಾಗಿ ಹೇಳಿದೆ. ಆದರೆ ಗ್ರಾಹಕರು ಈ ಸೌಲಭ್ಯವನ್ನು ಪಡೆದುಕೊಳ್ಳಬೇಕೆ? ಪಡೆದುಕೊಂಡರೆ ಏನಾಗುತ್ತದೆ? ಒಂದು ವೇಳೆ ಬ್ಯಾಂಕ್ಗಳು ಆರ್ಬಿಐನ ಈ ನಿರ್ಧಾರವನ್ನು ಪಾಲಿಸಲು ನಿರಾಕರಿಸಿದರೆ ಏನು…. ಎಂಬ ಪ್ರಶ್ನೆಗಳಿಗೆ ಉತ್ತರ ಒದಗಿಸುವ ಪ್ರಯತ್ನ ಇದಾಗಿದೆ.
ವಾಸ್ತವದಲ್ಲಿ ಸಾಲದ ಮೂರು ತಿಂಗಳ ಮಾಸಿಕ ಕಂತಿನ ಪಾವತಿಗೆ ವಿನಾಯ್ತಿ ನೀಡುವಂತೆ ಆರ್ಬಿಐ ಬ್ಯಾಂಕ್ಗಳಿಗೆ ಆದೇಶಿಸಿಲ್ಲ. ಬದಲಿಗೆ ಈ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸುವ ಸಾಧ್ಯತೆ ಬಗ್ಗೆ ಚಿಂತನೆ ನಡೆಸಿ, ನಿರ್ಧಾರ ಕೈಗೊಳ್ಳುವುದನ್ನು ಬ್ಯಾಂಕ್ಗಳ ವಿವೇಚನೆಗೆ ಬಿಟ್ಟಿದೆ.
ನಿಜವಾಗಿ ಹೇಳಬೇಕೆಂದರೆ ಆರ್ಬಿಐನ ಈ ನಿರ್ಧಾರವನ್ನು ಬ್ಯಾಂಕ್ಗಳು ಒಪ್ಪಿಕೊಳ್ಳಲೇಬೇಕು ಎಂದೇನಿಲ್ಲ. ಆರ್ಥಿಕ ಆರೋಗ್ಯದ ನೆಪವೊಡ್ಡಿ, ಮಾಸಿಕ ಕಂತುಗಳ ಪಾವತಿಗೆ ವಿನಾಯ್ತಿ ನೀಡದಿರಲೂ ಬಹುದು. ಆದರೆ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಮಾತ್ರ ಆರ್ಬಿಐ ನಿರ್ಧಾರವನ್ನು ಜಾರಿಗೊಳಿಸುವುದಾಗಿ ಹೇಳಿದೆ.
ಬಡ್ಡಿ ಬೆಳೆಯುತ್ತೆ: ಮೂರು ತಿಂಗಳ ಮಾಸಿಕ ಕಂತಿನ ಪಾವತಿಯ ವಿನಾಯ್ತಿ ಪಡೆದುಕೊಂಡರೆ ಏನಾಗುತ್ತದೆ? ಬಡ್ಡಿ ಬೆಳೆಯುತ್ತದೆ, ಸಾಲ ತೀರುವಳಿ ಅವಧಿ ಹೆಚ್ಚುವರಿ ಮೂರು ತಿಂಗಳಿಗೆ ಮುಂದುವರಿಯುತ್ತದೆ.
ಆರ್ಬಿಐನ ನಿರ್ಧಾರದ ಪ್ರಕಾರ ಮಾ.1ರಿಂದ ಮೇ 31ರ ನಡುವಿನ ಮಾಸಿಕ ಕಂತುಗಳಿಗೆ ಈ ವಿನಾಯ್ತಿ ಅನ್ವಯವಾಗುತ್ತದೆ. ಈ ಸೌಲಭ್ಯ ಪಡೆದುಕೊಳ್ಳುವುದರಿಂದ, ಈ ಮೂರು ತಿಂಗಳ ಅವಧಿಯಲ್ಲಿ ಬಾಕಿವುಳಿಯುವ ಅಸಲಿನ ಮೇಲೆ ಹೆಚ್ಚುವರಿ ಬಡ್ಡಿ ಬೆಳೆಯುತ್ತದೆ. ಜತೆಗೆ ಕಂತಿನ ಪಾವತಿ ಅವಧಿ ಹೆಚ್ಚುವರಿಯಾಗಿ ಮೂರು ತಿಂಗಳು ಮುಂದುವರಿಯುತ್ತದೆ. ಆದ್ದರಿಂದ ತೀರಾ ಅನಿವಾರ್ಯ ಅಲ್ಲದ ಹೊರತು ಈ ಸೌಲಭ್ಯವನ್ನು ಪಡೆಯದಿರುವುದು ಒಳಿತು ಎಂದು ಆರ್ಥಿಕ ತಜ್ಞರು ಸಲಹೆ ನೀಡಿದ್ದಾರೆ.
ಕ್ರೆಡಿಟ್ಕಾರ್ಡ್ ಪಾವತಿ ನಿಲ್ಲಿಸಬೇಡಿ: ಕ್ರೆಡಿಟ್ಕಾರ್ಡ್ ಮೂಲಕ ಖರೀದಿ ಮಾಡಿ ಮೊತ್ತದ ಪಾವತಿಯನ್ನು ಸಮಾನ ಮಾಸಿಕ ಕಂತಿಗೆ ಪರಿವರ್ತಿಸಿಕೊಂಡಿದ್ದರೆ, ಕಂತು ಪಾವತಿಸುವುದು ಒಳಿತು. ಇಲ್ಲವಾದಲ್ಲಿ, ಕಂತಿನ ಜತೆಗೆ ಕ್ರೆಡಿಟ್ಕಾರ್ಡ್ ಮೂಲಕ ಆ ತಿಂಗಳಲ್ಲಿ ಮಾಡಿದ ಖರೀದಿಯ ಮೊತ್ತ ಹೆಚ್ಚಾಗಿದ್ದರೆ, ಆ ಮೊತ್ತಕ್ಕೆ ಸಮನಾಗಿ ಮಾಸಿಕ ಕಂತಿನ ಮೇಲೂ ಬಡ್ಡಿ ವಿಧಿಸಲಾಗುತ್ತದೆ ಎಂದು ಆರ್ಥಿಕ ತಜ್ಞರು ಎಚ್ಚರಿಕೆ ನೀಡಿದ್ದಾರೆ.
VIDEO: ಕರೊನಾ ನೆಪದಲ್ಲಿ ಹಾಡು ಹೇಳಿದ್ರು ಜನಪ್ರಿಯ ಕವಿ ಬಿ.ಆರ್.ಲಕ್ಷ್ಮಣ ರಾವ್