ಬೆಂಗಳೂರು : ನಕಲಿ ದಾಖಲೆ ಸೃಷ್ಟಿಸಿ ಬಿಎಡಿ ಸೈಟ್ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಗಳನ್ನು ಬಿಡಿಎ ವಿಚಕ್ಷಣ ದಳ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಬಿಡಿಎ ವಿಚಕ್ಷಣ ದಳದ ಇನ್ಸ್ಪೆಕ್ಟರ್ ರವಿಕುಮಾರ್ ದೂರು ನೀಡಿದ್ದಾರೆ. ಈ ಮೇರೆಗೆ ಆರೋಪಿಗಳಾದ ಪಿ.ವಿನಯ್ ಮತ್ತು ಮುನಿರತ್ನಾ ಎಂಬುವರ ವಿರುದ್ಧ ಎ್ಐಆರ್ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಶೇಷಾದ್ರಿಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಬನಶಂಕರಿ 3ನೇ ಹಂತ 3ನೇ ಬ್ಲಾಕ್ನಲ್ಲಿ ಜಿ ಪ್ರವರ್ಗದಡಿ 40X60 ಅಡಿ ಅಳತೆ ಸೈಟ್ 2003ರಲ್ಲಿ ಎಚ್.ಸಿ.ಕರಿಯಪ್ಪ ಎಂಬುವರಿಗೆ ಹಂಚಿಯಾಗಿತ್ತು. ಇದಕ್ಕೂ ಮೊದಲು ಬಿಡಿಎ ಅಧಿಕಾರಿಗಳ ನಕಲಿ ಸೀಲು, ಸಹಿ ಮಾಡಿಕೊಂಡು ಸ್ವಾಧೀನಪತ್ರವನ್ನು ಸೃಷ್ಟಿಸಿಕೊಂಡಿದ್ದರು. ಬಿಡಿಎ ಪರವಾಗಿ ಉಪ ಕಾರ್ಯದರ್ಶಿ ಬರೆದುಕೊಟ್ಟಂತೆ ನಕಲಿ ಶುದ್ಧ ಕ್ರಯ ಪತ್ರವನ್ನು ಬಸವನಗುಡಿ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ 1993-94ರಲ್ಲಿ ಮುನಿರತ್ನಾ ಹೆಸರಿಗೆ ನೋಂದಣಿ ಮಾಡಿಸುತ್ತಾರೆ.
ಮತ್ತೆ 2018ರಲ್ಲಿ ಇದೇ ಸೈಟನ್ನು ಮುನಿರತ್ನಾ ಕಡೆಯಿಂದ ವಿನಯ್ಗೆ ಮಾರಾಟ ಮಾಡಿ ಶುದ್ಧ ಕ್ರಮಪತ್ರವನ್ನು ಬನ್ನೇರುಘಟ್ಟ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಿದ್ದರು. ಖಾತಾ ವರ್ಗಾಯಿಸಲು ಬಿಬಿಎಂಪಿಗೆ ಮನವಿಯನ್ನು ಸಲ್ಲಿಸಿದ್ದರು. ಈ ವೇಳೆ ದಾಖಲೆ ಪರಿಶೀಲನೆ ನಡೆಸಿದಾಗ ಬಿಡಿಎಗೆ ವಂಚನೆ ಮಾಡುವ ಉದ್ದೇಶಕ್ಕೆ ನಕಲಿ ದಾಖಲೆ ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ ಎಂದು ಇನ್ಸ್ಪೆಕ್ಟರ್ ರವಿಕುಮಾರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.