ಬೆಂಗಳೂರು: ರಜತ ಸಂಭ್ರಮದಲ್ಲಿರುವ ಏಷ್ಯಾದ ಅತೀ ದೊಡ್ಡ ಟೆಕ್ ಶೃಂಗ ಸಭೆ ನಗರದ ಅರಮನೆ ಮೈದಾನದಲ್ಲಿ ಇಂದು(ಬುಧವಾರ) ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಉದ್ಘಾಟಿಸಿರು.
ಇಡೀ ಜಗತ್ತಿನ ತಂತ್ರಜ್ಞಾನದ ಬೆಳವಣಿಗೆಯನ್ನು ವರ್ಷ ವರ್ಷವೂ ಅನಾವರಣಗೊಳಿಸುತ್ತಾ ಬಂದಿರುವ ‘ಬೆಂಗಳೂರು ತಂತ್ರಜ್ಞಾನ ಶೃಂಗ’ದ ರಜತೋತ್ಸವ ಸಮಾವೇಶ 3 ದಿನಗಳವರೆಗೆ ನಡೆಯಲಿದೆ.
ಟೆಕ್ ಶೃಂಗ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಐಟಿ-ಬಿಟಿ ಸಚಿವ ಅಶ್ವತ್ಥ ನಾರಾಯಣ್, ಸಂಯುಕ್ತ ಅರಬ್ ಸಂಸ್ಥಾನದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಖಾತೆಯ ಸಹಾಯಕ ಸಚಿವ ಒಮರ್ ಬಿನ್ ಸುಲ್ತಾನ್ ಅಲ್ ಒಲಾಮಾ, ಆಸ್ಪ್ರೇಲಿಯಾದ ವಿದೇಶಾಂಗ ಖಾತೆ ಸಹಾಯಕ ಸಚಿವ ಟಿಮ್ ವ್ಯಾಟ್ಸ್, ಫಿನ್ಲೆಂಡ್ನ ವಿಜ್ಞಾನ ಸಚಿವ ಪೆಟ್ರಿ ಹಾನ್ಕೊನೆನ್, ಭಾರತದ ಮೊದಲ ಯೂನಿಕಾರ್ನ್ ಕಂಪನಿ ‘ಇಮ್ಮೊಬಿ’ಯ ಸಂಸ್ಥಾಪಕ ನವೀನ್ ತಿವಾರಿ, ಬಯೋಕಾನ್ ಕಿರಣ್ ಮಜುಮ್ದಾರ್ ಷಾ, ಅಮೆರಿಕದ ಕಿಂಡ್ರಿಲ್ ಕಂಪನಿಯ ಸಿಇಒ ಮಾರ್ಟಿನ್ ಶ್ರೋಟರ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದಾರೆ.
3 ದಿನಗಳ ಕಾಲ ಭೌತಿಕ ಸ್ವರೂಪದಲ್ಲಿ ನಡೆಯುವ ಈ ಸಮಾವೇಶವು ಕನಿಷ್ಠ 9 ಒಡಂಬಡಿಕೆಗಳಿಗೆ (ಎಂಒಯು) ಹಾಗೂ 20ಕ್ಕೂ ಹೆಚ್ಚು ಉತ್ಪನ್ನಗಳ ಬಿಡುಗಡೆಗೆ ಸಾಕ್ಷಿಯಾಗಲಿದೆ. ಬೆಳ್ಳಿ ಹಬ್ಬದ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಮರಣಿಕೆ ಬಿಡುಗಡೆ ಮಾಡಿದರು.
ಈ ಸಮಾವೇಶದಲ್ಲಿ 575 ಹೆಚ್ಚು ಪ್ರದರ್ಶಕರು, ದೇಶದ 16 ವಿವಿಧ ರಾಜ್ಯಗಳ ಸ್ಟಾರ್ಟಪ್ಗಳು ಪಾಲ್ಗೊಂಡಿರುವುದು ಈ ಬಾರಿಯ ವಿಶೇಷ. 350ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪರಿಣತರು ತಂತ್ರಜ್ಞಾನದ ಮಜಲುಗಳ ಬಗ್ಗೆ ಬೆಳಕು ಚೆಲ್ಲಲಿದ್ದಾರೆ. ಅಲ್ಲದೆ 5,000ಕ್ಕೂ ಹೆಚ್ಚು ಉದ್ಯಮಿಗಳು ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.