ಎನ್.ಆರ್.ಪುರ: ಹೋಟೆಲ್, ಅಂಗಡಿ ಮಾಲೀಕರು ಬೀಡಿ, ಸಿಗರೇಟ್, ಗುಟ್ಕಾ, ಪಾನ್ಪರಾಗ್ ಹಾಗೂ ಇತರೆ ತಂಬಾಕು ಉತ್ಪನ್ನಗಳನ್ನು ಚಿಲ್ಲರೆ ಮಾರಾಟ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡದಂತೆ ಕ್ರಮವಹಿಸಬೇಕು ಎಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಮಾಜ ಕಾರ್ಯಕರ್ತ ರಾಘವೇಂದ್ರ ಹೇಳಿದರು.
ತಾಲೂಕಿನ ಮೆಣಸೂರು, ಹೊಸರೋಡ್, ಸೌತಿಕೆರೆ, ಶೆಟ್ಟಿಕೊಪ್ಪ, ಮಡಬೂರು ಗ್ರಾಮಗಳಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ತಾಲೂಕು ತನಿಖಾ ದಳ ಕಾರ್ಯಾಚರಣೆ ತಂಡದಿಂದ ಧೂಮಪಾನ ನಿಷೇಧದ ಬಗ್ಗೆ ಹಾಗೂ ತಂಬಾಕು ಉತ್ನನ್ನಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
2003ರ ತಂಬಾಕು ನಿಯಂತ್ರ ಕಾಯ್ದೆಯ (ಕೋಟ್ಪಾ) ಕಾನೂನಿನಡಿ ಅಂಗಡಿ, ಹೋಟೆಲ್ಗಳಲ್ಲಿ ಚಿಲ್ಲರೆ ಮಾರಾಟ ಮಾಡದಂತೆ ಅರಿವು ಮೂಡಿಸಲಾಗಿದೆ. 18ವರ್ಷದೊಳಗಿನವರಿಗೆ ತಂಬಾಕು ಉತ್ಪನ್ನಗಳನ್ನು ನೀಡದಂತೆ ಅಂಗಡಿಯವರು ಕ್ರಮವಹಿಸಬೇಕು ಎಂದರು. ಪ್ರತಿ ತಿಂಗಳು ಗ್ರಾಪಂ ವ್ಯಾಪ್ತಿಯ ಹೋಟೆಲ್, ಅಂಗಡಿ ಮಾಲೀಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ವಿವಿಧ ಅಂಗಡಿಗಳಲ್ಲಿ 12 ಪ್ರಕರಣಗಳನ್ನು ಪತ್ತೆ ಮಾಡಿ 2200 ದಂಡ ವಿಧಿಸಲಾಯಿತು. ತನಿಖಾ ತಂಡದಲ್ಲಿ ಆರೋಗ್ಯ ನಿರೀಕ್ಷಕ ನಾಗೇಂದ್ರಪ್ಪ, ಶಿಕ್ಷಣ ಇಲಾಖೆ ಸೇವ್ಯಾನಾಯ್ಕಾ, ಕೌಶಿಕ್ಗೌಡ ಇದ್ದರು.