ಬಾಗಲಕೋಟೆ: ಕರ್ನಾಟಕದ ಅತ್ಯಂತ ಬೃಹತ್ ನೀರಾವರಿ ಯೋಜನೆ ಎನಿಸಿಕೊಂಡಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿ ಆರಂಭಿಸಿ ಜಲಾಶಯ ನಿರ್ಮಾಣ ಮಾಡಿದ್ದು ನನ್ನ ಕಾಲದಲ್ಲಿ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದ್ದಾರೆ.ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮದಲ್ಲಿ ಭಾನುವಾರ ಕಾಂಗ್ರೆಸ್ ಮುಖಂಡ ಎಸ್.ಆರ್.ಪಾಟೀಲ 74ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ನಾನು ಮೊದಲು ಸಣ್ಣ ಕೈಗಾರಿಕೆ ಸಚಿವನಾಗಿ ಕೆಲಸ ಆರಂಭ ಮಾಡಿದ್ದೆ ಅಂದಿನ ಅಖಂಡ ವಿಜಯಪುರ ಜಿಲ್ಲೆಯ ನೇಕಾರರಿಂದ ಎಂದರು.
ನಾನು ಸಿಎಂ ಆಗಿದ್ದಾಗ ಬಹಳ ವೇದನೆ ಆಗಿದ್ದು ಕೃಷ್ಣಾ ಮೇಲ್ದಂಡೆ ವಿಚಾರದಲ್ಲಿ. ಲಾಲ್ಬಹಾದುರ್ ಶಾಸ್ತ್ರಿ ಅವರು ಶಂಕುಸ್ಥಾಪನೆ ನೆರವೇರಿಸಿದ ಬಳಿಕ ನಾನು ಸಿಎಂ ಆಗಿ ಬರುವವರೆಗೂ ಒಂದು ಕಲ್ಲು ಕೂಡ ಹಾಕಿರಲಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದಾಗ ಹಣ ಇಲ್ಲ ಎಂದರು. ಆಗ ರಿಸರ್ವ್ ಬ್ಯಾಂಕಿನಿಂದ ವಿಶೇಷ ಅನುಮತಿ ಪಡೆದು ಬಾಂಡ್ ಸಿಸ್ಟಮ್ ಜಾರಿಗೆ ತಂದಿದ್ದೆ. ಆಗಲೇ ಕೃಷ್ಣಾ ಭಾಗ್ಯಜಲ ನಿಗಮ ಆರಂಭವಾಯಿತು. ಎರಡು ವರ್ಷಗಳ ಅವಧಿಯಲ್ಲಿ ಜಲಾಶಯ ನಿರ್ಮಿಸಿ ಗೇಟ್ ಫಿಕ್ಸೃ್ ಮಾಡುವಾಗ ನನ್ನ ಅಧಿಕಾರ ಮುಗಿಯಿತು. ಇಲ್ಲವಾದಲ್ಲಿ ನಾನೇ ಆಗ ನೀರು ನಿಲ್ಲಿಸುತ್ತಿದ್ದೆ. ಇವತ್ತು ಜಲಾಶಯ ನಿರ್ಮಾಣ ಆಗಿದೆ. ನೀರು ನಿಂತಿದ್ದು ನೋಡಿ ನನಗೆ ಬಹಳ ಸಂತೋಷ ಆಗಿದೆ. ಇವತ್ತು ಈ ಭಾಗವನ್ನು ನೋಡಿದಾಗ ಬಹಳ ಸಂತೋಷವಾಗುತ್ತಿದೆ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹರ್ಷ ವ್ಯಕ್ತಪಡಿಸಿದರು.