More

    ವಿದೇಶದಿಂದ ಬಂದವರ ತಪಾಸಣೆ ಕಡ್ಡಾಯ

    ಬಾಗಲಕೋಟೆ: ಕರೊನಾ ವೈರಸ್ ರಾಜ್ಯದಲ್ಲಿಯೂ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ವಿದೇಶದಿಂದ ಜಿಲ್ಲೆಗೆ ಆಗಮಿಸುವ ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯ ತಪಾಸಣೆ ಮಾಡಬೇಕು. ಕಡ್ಡಾಯವಾಗಿ 14 ದಿನಗಳವರೆಗೆ ಪ್ರತ್ಯೇಕ ಕೊಠಡಿಯಲ್ಲಿ ಇರಿಸಿ ನಿಗಾವಹಿಸುವಂತೆ ಜಿಲ್ಲಾಧಿಕಾರಿ ಕೆ. ರಾಜೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

    ಕರೊನಾ ವೈರಸ್ ಹಿನ್ನೆಲೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರ ತುರ್ತು ಸಭೆ ನಡೆಸಿದ ಅವರು, ಕಲಬುರಗಿಯಲ್ಲಿ 72 ವರ್ಷದ ವೃದ್ಧ ಕರೊನಾಗೆ ಬಲಿಯಾಗಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಜಾಗ್ರತೆವಹಿಸುವುದು ಅಗತ್ಯವಾಗಿದೆ. ಈವರೆಗೆ ಜಿಲ್ಲೆಯಲ್ಲಿ ಕರೊನಾ ವೈರಸ್ ಕಂಡು ಬಂದಿಲ್ಲ. ಆದರೂ ಸಹ ಜಿಲ್ಲೆಯ ಆಯಾ ತಾಲೂಕು ತಹಸೀಲ್ದಾರರು ವಿದೇಶಗಳಿಗೆ ಹೋಗಿ ಮರಳಿ ಬರುವವರ ಮಾಹಿತಿಯನ್ನು ಪ್ರತಿದಿನ ಪತ್ತೆ ಮಾಡಿ ಮಾಹಿತಿ ಪಡೆದು ತಾಲೂಕು ವೈದ್ಯಾಧಿಕಾರ ಗಮನಕ್ಕೆ ತರಬೇಕು. ಅಲ್ಲದೆ, ಗ್ರಾಮವಾರು ಸಹ ಗ್ರಾಮ ಲೆಕ್ಕಾಧಿಕಾರಿಗಳಿಂದಲೂ ಈ ಕುರಿತು ಮಾಹಿತಿಯನ್ನು ಕಲೆ ಹಾಕಬೇಕು ಎಂದರು.

    ನಿಗಾ ಕೊಠಡಿಯಲ್ಲಿರಿಸಿದ ವ್ಯಕ್ತಿಯಲ್ಲಿ ಕರೊನಾ ವೈರಸ್ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗೆ ಮಾಹಿತಿ ನೀಡಿ ತಪಾಸಣೆಗೆ ಒಳಪಡಿಸುವ ಕೆಲಸವಾಗಬೇಕು. ಲಕ್ಷಣಗಳು ಕಂಡ ಬಂದ ವ್ಯಕ್ತಿಯ ರಕ್ತ ಮತ್ತು ಗಂಟಲು ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿ ಸೋಂಕು ತಗಲಿರುವ ಬಗ್ಗೆ ದೃಢಪಡಿಸಿಕೊಳ್ಳಬೇಕು. ವಿದೇಶದಿಂದ ಬಂದ ವ್ಯಕ್ತಿ ಮೇಲೆ ತಕ್ಷಣ ನಿಗಾವಹಿಸುವುದು ಮಹತ್ವದ್ದಾಗಿದ್ದು, ತಪಾಸಣೆಗೆ ಒಳಪಡಿಸುವ ಕಾರ್ಯವಾಗಬೇಕು. ಸಾರ್ವಜನಿಕರು ಸಹ ವಿದೇಶ ಪ್ರವಾಸ ಮುಗಿಸಿ ಜಿಲ್ಲೆಗೆ ಬಂದ ವ್ಯಕ್ತಿಗಳ ಮಾಹಿತಿಯನ್ನು ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗೆ ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದರು.

    ಐತಿಹಾಸಿಕ ತಾಣಗಳಾದ ಬಾದಾಮಿ, ಪಟ್ಟದಕಲ್ಲು ಹಾಗೂ ಐಹೊಳೆಗೆ ವಿದೇಶದಿಂದ ಹೆಚ್ಚಾಗಿ ಪ್ರವಾಸಿಗರು ಆಗಮಿಸುತ್ತಾರೆ. ಪ್ರವಾಸಿಗರ ಬಗ್ಗೆ ನಿಗಾವಹಿಸಿ ಮಾಹಿತಿ ಪಡೆಯಬೇಕು. ರೆಸ್ಟೋರೆಂಟ್, ಹೋಟೆಲ್‌ಗಳಿಗೆ ಬರುವ ವಿದೇಶಿ ಪ್ರವಾಸಿಗಳ ಬಗ್ಗೆ ಮಾಹಿತಿಯನ್ನು ಕಲೆಹಾಕಿ ತಪಾಸಣೆಗೆ ಒಳಪಡಿಸಬೇಕು. ಪ್ರವಾಸಿ ಸ್ಥಳಗಳ ವ್ಯಾಪ್ತಿಯಲ್ಲಿ ನಿಗಾವಹಿಸಲು ಸಿಬ್ಬಂದಿಯನ್ನು ನಿಯೋಜಿಸುವಂತೆ ಆಯಾ ತಹಸೀಲ್ದಾರರಿಗೆ ಸೂಚಿಸಿದರು. ಜಿಲ್ಲೆಯ ಜನತೆ ಕರೊನಾ ವೈರಸ್ ಬಗ್ಗೆ ಆತಂತ ಪಡುವ ಅಗತ್ಯವಿಲ್ಲ. ವೈರಸ್ ಹರಡದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

    ಕರೊನಾ ವೈರಸ್ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎ.ಎನ್. ದೇಸಾಯಿ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ವಿಜಯ ಕಂಠಿ ವಿವರಿಸಿದರು. ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪ ವಿಭಾಗಾಧಿಕಾರಿ ಎಂ. ಗಂಗಪ್ಪ, ಜಿಲ್ಲಾ ಶಸ ಚಿಕಿತ್ಸಕ ಡಾ.ಪ್ರಕಾಶ ಬಿರಾದಾರ, ತಹಸೀಲ್ದಾರ್ ಗುರುಸಿದ್ದಯ್ಯ ಹಿರೇಮಠ ಸೇರಿ ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆ ವೈದ್ಯಾಧಿಕಾರಿಗಳು, ಸ್ಥಳೀಯ ಸಂಸ್ಥೆ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.

    ಸಿರಿಧಾನ್ಯ ಮೇಳ ರದ್ದು
    ಜಮಖಂಡಿ ತಾಲೂಕಾ ಕ್ರೀಡಾಂಗಣದಲ್ಲಿ ಮಾ.14 ಮತ್ತು 15 ರಂದು ಜರುಗಬೇಕಾಗಿದ್ದ ಸಿರಿಧಾನ್ಯ, ಸಾವಯವ ಹಾಗೂ ಆಹಾರ ಮೇಳ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ರದ್ದುಗೊಳಿಸಲಾಗಿದೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಕಳೆದ 14 ದಿನಗಳಿಂದ ವಿದೇಶ ಪ್ರವಾಸದಿಂದ ಬಾಗಲಕೋಟೆ ಜಿಲ್ಲೆಗೆ ಯಾರಾದರೂ ಬಂದು ತಲುಪಿದಲ್ಲಿ ಕಡ್ಡಾಯವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸ್ವಯಂ ಪ್ರೇರಿತರಾಗಿ ಮಾಹಿತಿ ನೀಡತಕ್ಕದ್ದು. ಯಾವುದೇ ಜ್ವರ, ಕೆಮ್ಮು ಹಾಗೂ ಶೀತದ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಡಿಎಚ್‌ಒ ಡಾ. ಎ.ಎನ್. ದೇಸಾಯಿ (9449843041), ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ವಿಜಯ ಕಂಠಿ (9880702314) ಹಾಗೂ ಜಿಲ್ಲಾ ಎಪಿಡಾಮಾಲಾಜಿಸ್ಟ್ ಡಾ. ಸೀಮಾ ಹುದ್ದಾರ (9448635686) ಇವರಿಗೆ ಕರೆ ಮಾಡಿ ಮಾಹಿತಿ ನೀಡಬೇಕು.
    ಕೆ. ರಾಜೇಂದ್ರ ಜಿಲ್ಲಾಧಿಕಾರಿ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts