ಬಾಗಲಕೋಟೆ: ಜಿಲ್ಲೆಯ ವಿವಿಧೆಡೆ ಶನಿವಾರ ಸಂಜೆ ವರುಣನ ಆರ್ಭಟ ನಡೆಯಿತು. ಬಾಗಲಕೋಟೆ, ಮುಧೋಳ, ಮಹಾಲಿಂಗಪುರ, ರಬಕವಿ-ಬನಹಟ್ಟಿ, ತೇರದಾಳ, ಹುನಗುಂದ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉತ್ತಮ ಮಳೆ ಆಗಿದೆ.
ಬೆಳಗ್ಗೆಯಿಂದಲೇ ಅಲ್ಲಲ್ಲಿ ಮೋಡಕವಿದ ವಾತಾವರಣ ಇತ್ತು. ಸಂಜೆ ನಾಲ್ಕು ಗಂಟೆ ವೇಳೆಗೆ ಜೋರಾಗಿ ಗಾಳಿ ಬೀಸಲು ಆರಂಭಿಸಿತು. ಬೆನ್ನಲ್ಲೇ ಧಾರಾಕಾರ ಮಳೆ ಸುರಿಯಿತು.
ಮಳೆ ಆರಂಭವಾದ ವೇಳೆ ಭಾರಿ ಪ್ರಮಾಣದಲ್ಲಿ ಗಾಳಿಯೂ ಬೀಸಲು ಆರಂಭಿಸಿದ್ದರಿಂದ ಅನಾಹುತಗಳು ಸಂಭವಿಸುವ ಆತಂಕ ಶುರುವಾಗಿತ್ತು. ಆದರೆ, ಸದ್ಯಕ್ಕೆ ಎಲ್ಲಿಯೂ ಮಳೆಯಿಂದ ಭಾರಿ ಹಾನಿ ಆಗಿರುವ ವರದಿಗಳು ಆಗಿಲ್ಲ.
ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಅಂತಹ ಮಳೆ ಆಗಿರಲಿಲ್ಲ. ಶನಿವಾರ ಸಂಜೆ ಅರ್ಧ ಗಂಟೆಗೂ ಹೆಚ್ಚು ಹೊತ್ತು ಉತ್ತಮ ಮಳೆ ಆಗಿದೆ. ಇದರಿಂದ ಮುಂಗಾರು ಕೃಷಿ ಚಟುವಟಿಕೆಗೆ ಸಹಾಯವಾಗಿದೆ.