More

    ಸರ್ಕಾರಿ ಶಾಲೆಗಳಲ್ಲಿ ಕೈತೋಟ ನಿರ್ಮಿಸಿ

    ಬಾಗಲಕೋಟೆ: ಸ್ಥಳಾವಕಾಶ, ಕಾಂಪೌಂಡ್ ಗೋಡೆ ಹಾಗೂ ನೀರಿನ ಸೌಕರ್ಯ ಇರುವ ಸರ್ಕಾರಿ ಶಾಲೆಗಳಲ್ಲಿ ನರೇಗಾ ಯೋಜನೆಯಡಿ ಪೌಷ್ಟಿಕ ಆಹಾರದ ಬೆಳೆಗಳ ಕೈತೋಟ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಪಂ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಾಲೆಗಳಲ್ಲಿ ಕೈತೋಟ ನಿರ್ಮಾಣಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತರು ಅನುಮತಿ ನೀಡಿದ್ದಾರೆ. ಕೈತೋಟ ನಿರ್ಮಾಣಕ್ಕೆ ಅಗತ್ಯವಿರುವ ಸೌಲಭ್ಯಗಳು ಹೊಂದಿದ ಶಾಲೆಗಳ ಪಟ್ಟಿಯನ್ನು ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್.ಬಿರಾದಾರ ಅವರಿಗೆ ಸೂಚಿಸಿದರು.

    ಶಾಲೆಗಳ ಪಟ್ಟಿ ಪಡೆದ ನಂತರ ಮಕ್ಕಳಿಗೆ ಉಪಯೋಗವಾಗುವಂತಹ ಗಿಡಗಳನ್ನು ತೋಟಗಾರಿಕೆ, ಅರಣ್ಯ ಇಲಾಖೆಯವರು ಒದಗಿಸಬೇಕು. ತೆಂಗು, ಚಿಕ್ಕು, ಸೀತಾಲ ಸೇರಿ ಇತರ ಹಣ್ಣಿನ ಗಿಡಗಳನ್ನು ಬೆಳೆಸಬೇಕು ಎಂದರು.

    ಅಂಗವಿಕಲರಿಗೆ, ಹಿರಿಯ ನಾಗರಿಕರಿಗೆ, ವಿಧವೆಯರಿಗೆ ಸರಿಯಾಗಿ ಮಾಸಾಶನ ಜಮಾ ಆಗುತ್ತಿಲ್ಲ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು. ಅಲ್ಲದೆ, ರೈತರಿಗೆ ತಾಡಪತ್ರೆ ವಿತರಣೆಯಲ್ಲಿ ಸಮಸ್ಯೆ ಇರುವುದಾಗಿ ತಿಳಿದು ಬಂದಿದೆ. ರಸ ಗೊಬ್ಬರ ಕೊರತೆಯಾಗಿದೆ ಎನ್ನುವ ಮಾಹಿತಿ ಇದೆ. ನಕಲಿ ಕೀಟನಾಶಕಗಳು ಮಾರಾಟ ಮಾಡಲಾಗುತ್ತಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಗಮನ ಹರಿಸಬೇಕು ಎಂದರು.

    ಇದಕ್ಕೆ ಪ್ರತಿಕ್ರಿಯೆ ನೀಡಿದ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ, ಈ ಬಾರಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ರಸಗೊಬ್ಬರದ ಸಮಸ್ಯೆಯಾಗಂತೆ ನೋಡಿಕೊಳ್ಳಲಾಗುತ್ತಿದೆ. ಸಮಸ್ಯೆ ಉಂಟು ಮಾಡುವ ಹಾಗೂ ನಕಲಿ ಕೀಟನಾಶಕ ಮಾರಾಟ ಮಾಡುವ ಮಳಿಗೆಗಳನ್ನು ಜಪ್ತಿ ಮಾಡಲಾಗುತ್ತಿದೆ. ಪ್ರಸಕ್ತ ಮುಂಗಾರು ಹಂಗಾಮಿಗೆ ಶೇ.70 ರಷ್ಟು ಬೀಜ ಶೇ.103 ರಷ್ಟು ರಸಗೊಬ್ಬರ ವಿತರಿಸಲಾಗಿದೆ. ಶೇ.100 ಸಸ್ಯ ಸಂರಕ್ಷಣಾ ಔಷಧ, ಸಾವಿರ ಕಿರು ಪೊಟ್ಟಣ ವಿತರಿಸಲಾಗಿದೆ. ಇನ್ನು ತೋಟಗಾರಿಕೆಯಲ್ಲಿ ಕೇಂದ್ರ ವಲಯದಲ್ಲಿ ಶೇ.77 ರಷ್ಟು, ರಾಜ್ಯ ವಲಯದಲ್ಲಿ ಶೇ.70 ರಷ್ಟು ಸಾಧನೆ ಮಾಡಲಾಗಿದೆ ಎಂದರು.

    ಉದ್ಯೋಗ ಖಾತ್ರಿ ಯೋಜನೆಯಡಿ ವಾರ್ಷಿಕ ಗುರಿಗೆ ಶೇ.97 ರಷ್ಟು ಪ್ರಗತಿ ಸಾಧಿಸಲಾಗಿದೆ. ಸ್ವ-ಸಹಾಯ ಗುಂಪುಗಳಿಗೆ ನೀಡುವ ಸುತ್ತುನಿಧಿಯಲ್ಲಿ 360 ಗುರಿಗೆ 360 ಸಾಧನೆ ಮಾಡಲಾಗಿದೆ. ಸಂಜೀವಿನಿ, ಎನ್.ಆರ್.ಎಲ್.ಎಂ. ದಿಂದ ಅನುದಾನ ಬಿಡುಗಡೆಗೆ ಬಾಕಿ ಇರುವುದಾಗಿ ಜಿಪಂ ಯೋಜನಾ ನಿರ್ದೇಶಕ ಎಂ.ವಿ.ಚಳಗೇರಿ ಸಭೆಗೆ ತಿಳಿಸಿದರು.

    ಜಿಪಂ ಸಿಇಒ ಟಿ.ಭೂಬಾಲನ್, ಜಿಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಮುಖ್ಯ ಲೆಕ್ಕಾಧಿಕಾರಿ ಪ್ರಭು ಮಾನೆ ಸೇರಿ ವಿವಿಧ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.

    ಗ್ರಾಮಗಳ ಅಭಿವೃದ್ಧಿಗೆ ಅಧಿಕಾರಿಗಳು ಶ್ರಮಿಸಬೇಕು. ಸ್ವಚ್ಛ ಭಾರತ ಅಭಿಯಾನದಡಿ ಜಿಲ್ಲೆಯಲ್ಲಿ 15228 ಗುರಿ ಪೈಕಿ 12931 ಮಾತ್ರ ಶೌಚಗೃಹ ನಿರ್ಮಿಸಲಾಗಿದ್ದು, ಬಾಕಿ ಶೌಚಗೃಹಗಳನ್ನು ನಿಗದಿತ ಅವಧಿಯಲ್ಲಿ ಅನುಷ್ಠಾನಗೊಳಿಸಬೇಕು. ಕಾರ್ಯನಿರ್ವಹಣೆಯಲ್ಲಿ ನಿರ್ಲಕ್ಷೃ ವಹಿಸಬಾರದು.
    ಬಾಯಕ್ಕ ಮೇಟಿ, ಜಿಪಂ ಅಧ್ಯಕ್ಷೆ

    ಅನುದಾನ ಬಳಕೆ ಮಾಡಿ
    ಅರಣ್ಯ ಇಲಾಖೆಯಿಂದ 1683 ಹೆಕ್ಟೇರ್ ಗುರಿ ಪೈಕಿ 1930 ಹೆಕ್ಟೇರ್ ಪ್ರದೇಶದಲ್ಲಿ ಗಿಡಗಳನ್ನು ಬೆಳೆಸಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ತಿಳಿಸಿದರು. ನಿಗದಿತ ಅವಧಿಯಲ್ಲಿ ಬಿಡುಗಡೆಯಾದ ಅನುದಾನ ಬಳಕೆಯಾಗಬೇಕು ಎಂದು ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಸೂಚನೆ ನೀಡಿದರು. ನಂತರ ಕೃಷಿ, ತೋಟಗಾರಿಕೆ, ಅರಣ್ಯ, ಪಶುಪಾಲನೆ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಕ್ರೀಡೆ, ಜಿಲ್ಲಾ ಕೈಗಾರಿಕೆ, ಸಹಕಾರ, ಆರೋಗ್ಯ ಇಲಾಖೆ, ಸಹಕಾರ ಇಲಾಖೆ ಸೇರಿ ಇತರ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts