ಬಾಗಲಕೋಟೆ: ಡಿಸಿಸಿ ಬ್ಯಾಂಕ್ ಆಡಳಿತ ಚುನಾವಣೆಯಲ್ಲಿ ಪೊಲೀಸರು, ಸಹಕಾರಿ ಇಲಾಖೆ ಅಧಿಕಾರಿಗಳು ಬಿಜೆಪಿ ಅಣತಿಯಂತೆ ವರ್ತಿಸುತ್ತಿದ್ದಾರೆ. ಪ್ರತಿ ಹಂತದಲ್ಲಿಯೂ ದೌರ್ಜನ್ಯ ನಡೆಸಲಾಗುತ್ತಿದೆ. ನನಗೆ ಹಾಗೂ ಮತದಾನದ ಹಕ್ಕು ಪಡೆದ ನಮ್ಮ ತಂಡ ಸದಸ್ಯರಿಗೆ ಜೀವಕ್ಕೆ ಕುತ್ತು ಬಂದರೆ ಶಾಸಕ ದೊಡ್ಡನಗೌಡ ಪಾಟೀಲ, ಡಿಸಿಎಂ ಗೋವಿಂದ ಕಾರಜೋಳ ನೇರ ಹೊಣೆಗಾರರು ಎಂದು ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಇಡೀ ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆ ನಡೆಯುತ್ತಿದ್ದರೂ ಹುನಗುಂದ ಮತಕ್ಷೇತ್ರವನ್ನು ಮಾತ್ರ ಟಾರ್ಗೆಟ್ ಮಾಡಲಾಗುತ್ತಿದೆ. ಬಿಜೆಪಿಯವರು ಸೋಲಿನ ಭಯದಿಂದ ಅಧಿಕಾರ ದುರಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಉದ್ದೇಶ ಪೂರ್ವಕವಾಗಿ ಗದ್ದಲ, ಗಲಾಟೆ ಸೃಷ್ಟಿ ಮಾಡಲಾಗುತ್ತಿದೆ ಎಂದು ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಹುನಗುಂದ ತಾಲೂಕಿನ 15 ಪಿಕೆಪಿಎಸ್ ಸದಸ್ಯರು, ಇಳಕಲ್ಲ ತಾಲೂಕಿನ 10 ಪಿಕೆಪಿಎಸ್ ಸದಸ್ಯರು ಸೇರಿ 25 ಜನರಿಗೆ ಜೀವ ಬೆದರಿಕೆ ಇದೆ. ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಶಾಸಕ ದೊಡ್ಡನಗೌಡ ಪಾಟೀಲ, ಡಿಸಿಎಂ ಗೋವಿಂದ ಕಾರಜೋಳ ರಾಜಕೀಯ ಷಡ್ಯಂತ್ರ ನಡೆಸಿದ್ದಾರೆ. ಇದಕ್ಕೆ ಜಗ್ಗುವ ಜಾಯಮಾನ ನಮ್ಮದಲ್ಲ ಎಂದ ಅವರು, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲರ ಗಮನಕ್ಕೆ ತರಲಾಗಿದೆ ಎಂದರು.
ಹುನಗುಂದ ತಾಲೂಕಿನ ಘಟ್ಟಿಗನೂರ ಪಿಕೆಪಿಎಸ್ನಿಂದ ಡಿಸಿಸಿ ಬ್ಯಾಂಕ್ ಚುನಾವಣೆಗೆ ಮತದಾನದ ಹಕ್ಕು ನೀಡಿ ಠರಾವು ಪಡೆದುಕೊಳ್ಳುವ ಪ್ರಕ್ರಿಯೆ ವೇಳೆ ತಹಸೀಲ್ದಾರ್, ಸಿಪಿಐ, ಡಿವೈಎಸ್ಪಿ ಅನಗತ್ಯವಾಗಿ ಭಾಗವಹಿಸಿದ್ದಾರೆ. ಅಲ್ಲದೆ ಒತ್ತಡ ಹಾಕಿ ಬಿಜೆಪಿ ಪರ ಠರಾವು ಪಡೆದುಕೊಂಡಿದ್ದು, ಸಿಸಿಟಿವಿಯಲ್ಲಿ ಇದೆಲ್ಲ ಸೆರೆಯಾಗಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದ್ದು, ತಪ್ಪಿತಸ್ಥ ಅಧಿಕಾರಿಗನ್ನು ತಕ್ಷಣಕ್ಕೆ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.
ನ್ಯಾಯಾಲಯ ಎರಡು ಪಿಕೆಪಿಎಸ್ಗಳಲ್ಲಿ ಮರು ಠರಾವು ಕೈಗೊಳ್ಳಲು ಆದೇಶಿಸಿದ್ದರಿಂದ ಘಟ್ಟಿಗನೂರು ಸೂಳೇಬಾವಿ ಎರಡೂ ಪಿಕೆಪಿಎಸ್ಗಳಲ್ಲಿ ಗುರುವಾರ ಸಾಮಾನ್ಯ ಸಭೆ ನಡೆಸಿ ಠರಾವು ಕೈಗೊಂಡು ಡಿಸಿಸಿ ಬ್ಯಾಂಕ್ ಚುನಾವಣಾಧಿಕಾರಿಗೆ ನೀಡಲಾಗಿದೆ. ಪಿಕೆಪಿಎಸ್ನಲ್ಲಿ ದೌರ್ಜನ್ಯ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಲು ಹೋದಾಗ ಎ್ಐಆರ್ ಕೂಡ ದಾಖಲಿಸಿರಲಿಲ್ಲ. ಈ ಕುರಿತು ಹುನಗುಂದ ಜೆಎಂಎ್ಸಿ ಕೋರ್ಟ್ನಲ್ಲಿ ಖಾಸಗಿ ದೂರು ದಾಖಲಿಸಿದ್ದು, ಎ್ಐಆರ್ ದಾಖಲಿಸಲು ಕೋರ್ಟ್ ಪೊಲೀಸರಿಗೆ ಸೂಚನೆ ನೀಡಿದೆ ಎಂದರು.
ಇಳಕಲ್ಲ ಪಿಕೆಪಿಎಸ್ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಕೆಪಿಸಿಸಿ ಕಾರ್ಯದರ್ಶಿ ಎಂ.ಎಲ್. ಶಾಂತಗೇರಿ, ಮುಖಂಡರಾದ ಶಿವಲಿಂಗಪ್ಪ ನಾಲತವಾಡ, ಶಂಕ್ರಪ್ಪ ನೇಗಲಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಹುನಗುಂದ ಮತ್ತು ಇಳಕಲ್ಲ ಪಿಕೆಪಿಎಸ್ ಸೇರಿದಂತೆ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಶುಕ್ರವಾರ ನಾಮಪತ್ರ ಮರಳಿ ಪಡೆಯಲು ಕೊನೆಯ ದಿನವಾಗಿದ್ದು, ನಮ್ಮ ಪಕ್ಷದ ಹಿರಿಯರು ಒಮ್ಮತದ ಅಭ್ಯರ್ಥಿ ಘೋಷಣೆ ಮಾಡಲಿದ್ದಾರೆ.
ವಿಜಯಾನಂದ ಕಾಶಪ್ಪನವರ, ಮಾಜಿ ಶಾಸಕ, ಹುನಗುಂದ ಪಿಕೆಪಿಎಸ್ ಅಭ್ಯರ್ಥಿ