More

    4 ದಶಕದ ಪ್ರಕರಣ ಇತ್ಯರ್ಥ

    ಬಾಗಲಕೋಟೆ: ಎರಡು ಗ್ರಾಮಗಳ ನಡುವೆ ಕಳೆದ 40 ವರ್ಷಗಳಿಂದ ಬಗೆಹರಿಯದೆ ಜಟಿಲವಾಗಿದ್ದ ಪ್ರಕರಣವನ್ನು ನವನಗರದ ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಲೋಕ ಅದಾಲತ್‌ನಲ್ಲಿ ಕೇವಲ 5 ದಿನಗಳಲ್ಲಿ 40 ಗಂಟೆಗಳಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು.

    ಬಾಗಲಕೋಟೆ ತಾಲೂಕಿನ ಕಡ್ಲಿಮಟ್ಟಿ ಮತ್ತು ಮುಡಪಲಜೀವಿ ಗ್ರಾಮಗಳ ನಡುವೆ ಸಿದ್ಧೇಶ್ವರ ದೇವಸ್ಥಾನದ ಬಾಬುಗಳಿಗೆ ಸಂಬಂಧಿಸಿದ ಪ್ರಕರಣ 1977 ರಿಂದ ನ್ಯಾಯಾಲಯದಲ್ಲಿ ಇತ್ತು. 40 ವರ್ಷಗಳಿಂದಲೂ ಜೀವಂತವಾಗಿದ್ದ ವ್ಯಾಜ್ಯವನ್ನು ಪ್ರಧಾನ ಹಿರಿಯ ನ್ಯಾಯಾಧೀಶ ಪ್ರಕಾಶ ವಿ. ಮಧ್ಯಸ್ಥಿಕೆ ವಹಿಸಿ ಎರಡು ಗ್ರಾಮದ ಮುಖಂಡರನ್ನು ಸೇರಿಸಿ ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಿದ್ದಾರೆ.

    ಸಿದ್ಧೇಶ್ವರ ದೇವಸ್ಥಾನದ ಬಾಬುಗಳ ಕುರಿತು ಮುಡಪಲಜೀವಿ, ಚಿಕ್ಕ ಹೊದ್ಲೂರ, ಕಡ್ಲಿಮಟ್ಟಿ, ಶಿರಗುಪ್ಪಿ, ಅಚನೂರು, ಬೆನ್ನೂರು, ಲವಳೇಶ್ವರ, ಜಡ್ರಾಮಕುಂಟಿ ಸೇರಿದಂತೆ ಮುಂತಾದ ಗ್ರಾಮಗಳು ಹೊಂದಾಣಿಕೆ ಇದ್ದವು. ಆದರೆ, ದೇವಸ್ಥಾನದ ಕಲಶದ ವಿಚಾರವಾಗಿ ಕಡ್ಲಿಮಟ್ಟಿ ಮತ್ತು ಮುಡಪಲಜೀವಿ ಗ್ರಾಮಗಳ ನಡುವೆ ವ್ಯಾಜ್ಯ ಉಂಟಾಗಿತ್ತು. ನ್ಯಾ. ಪ್ರಕಾಶ ವಿ. ಅವರು ಸತತ 5 ಬಾರಿ ಗ್ರಾಮಸ್ಥರ ನಡುವೆ ಸಂಧಾನ ನಡೆಸಿದರು.
    ಮುಖ್ಯ ಕಲಶವು 2005 ರಿಂದ ಬಾಗಲಕೋಟೆ ತಹಸೀಲ್ದಾರರ ವಶದಲ್ಲಿತ್ತು. ಕಲಶವು ಎರಡು ಗ್ರಾಮದವರ ವಶಕ್ಕೆ ನೀಡದೆ ದೇವಸ್ಥಾನದಲ್ಲಿ ಇಡಬೇಕು. ಜಾತ್ರೆಯ ದಿನ ಎರಡು ಗ್ರಾಮದ ಹಿರಿಯರು ಮತ್ತು ದೇವಸ್ಥಾನದ ಅರ್ಚಕರು ಕಲಶವನ್ನು ಕಡ್ಲಿಮಟ್ಟಿ ಗ್ರಾಮಕ್ಕೆ ತೆಗೆದುಕೊಂಡ ಹೋಗಿ ಗ್ರಾಮಸ್ಥರಿಂದ ಪೂಜೆ ಸಲ್ಲಿಸಬೇಕು.

    ನಂತರ ಮುಡಪಲಜೀವಿ ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸಿದ ನಂತರ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಬೇಕು. ಅಲ್ಲಿ ಕಲಶಾರೋಹಣ ಮಾಡಿ ರಥೋತ್ಸವದ ನಂತರ ದೇವಸ್ಥಾನದ ಗರ್ಭಗುಡಿಯಲ್ಲಿಟ್ಟು ಪೂಜೆ ಪುನಸ್ಕಾರದ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ದೇವಸ್ಥಾನದ ಅರ್ಚಕರಿಗೆ ಜವಾಬ್ದಾರಿ ನೀಡುವ ಮೂಲಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಪ್ರಕರಣವನ್ನು ಇತ್ಯರ್ಥಪಡಿಸಲಾಗಿದ್ದು ಇಡೀ ರಾಜ್ಯಕ್ಕೆ ಮಾದರಿಯಾಗಿದೆ.

    ರಾಜಿ ಸಂಧಾನದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಲತಾ ಹುಲ್ಲೂರ, ಮುಡಪಲಜೀವಿ ಗ್ರಾಮದ ಪರ ವಕೀಲರಾದ ಎಸ್.ಎಸ್. ಹಿರೇಮಠ, ಎಂ.ಎಸ್. ಹಿರೇಮಠ, ಕಡ್ಲಿಮಟ್ಟ ಗ್ರಾಮದ ಪರ ವಕೀಲರಾದ ಪಿ.ಎ. ಕುಲಕರ್ಣಿ, ಎಸ್.ಎಸ್. ಹುಬ್ಬಳ್ಳಿ, ಬಾಗಲಕೋಟೆ ತಹಸೀಲ್ದಾರ್ ಗುರುಸಿದ್ದಯ್ಯ ಹಿರೇಮಠ ಹಾಗೂ ಅವರ ಪರ ವಕೀಲರಾದ ಎಸ್.ಎಲ್. ಕೋರಾ, ಮಧ್ಯಸ್ಥಿಕೆದಾರ ಎನ್.ಪಿ. ಪತ್ತಾರ, ಹಿರಿಯ ವಕೀಲ ಎ.ಎ. ಜವಳಿ, ಆರ್.ಎಸ್. ನಿಂಗೊಳ್ಳಿ, ಎಸ್.ಎಸ್. ಅನಾಮಿ, ಆರ್.ಬಿ. ಕುಂಟೋಜಿ, ನ್ಯಾಯಾಲಯದ ಬೆಂಚ್ ಸಹಾಯಕ ದಿನೇಶ ರಡ್ಡಿ ಕರಿರಡ್ಡೇರ ಇದ್ದರು.

    ಜಿಲ್ಲಾದ್ಯಂತ ಡಿ. 19ರಂದು ನಡೆದ ಲೋಕ ಅದಾಲತ್‌ನಲ್ಲಿ ಒಟ್ಟು 9615 ಪ್ರಕರಣಗಳ ಪೈಕಿ 5632 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ 3442 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. ಸಂಧಾನಕ್ಕಾಗಿ ಒಟ್ಟು 9615 ಪ್ರಕರಣಗಳಲ್ಲಿ 1039 ವ್ಯಾಜ್ಯಪೂರ್ವ ಪ್ರಕರಣಗಳು ಮತ್ತು 8576 ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳನ್ನು ತೆಗೆದುಕೊಳ್ಳಲಾಗಿತ್ತು. ಈ ಪೈಕಿ 1039 ವ್ಯಾಜ್ಯ ಪೂರ್ವ ಪ್ರಕರಣಗಳು ಮತ್ತು 4593 ನ್ಯಾಯಾಲದಲ್ಲಿ ವಿಚಾರಣೆಗಾಗಿ ಬಾಕಿ ಇರುವ ಪ್ರಕರಣಗಳು ಸೇರಿ ಒಟ್ಟು 5632 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.
    ಕಲ್ಪನಾ ಕುಲಕರ್ಣಿ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ

    ಮುಡಪಲಜೀವಿ ಮತ್ತು ಕಡ್ಲಿಮಟ್ಟಿ ಗ್ರಾಮಗಳ ನಡುವೆ ಮುಖ್ಯ ಕಲಶದ ವಿಚಾರವಾಗಿ ವ್ಯಾಜ್ಯ ಪ್ರಾರಂಭವಾದಾಗ ನನಗೆ 30 ವರ್ಷ. 40 ವರ್ಷದಿಂದ ನ್ಯಾಯಾಲಯದಲ್ಲಿ ವ್ಯಾಜ್ಯವನ್ನು ನಡೆಸಿಕೊಂಡು ಬಂದರೂ ಸಹಿತ ಒಮ್ಮತವಾದ ನ್ಯಾಯ ಸಿಕ್ಕಿರಲಿಲ್ಲ. ಲೋಕ ಅದಾಲತ್ ಶಿಬಿರದಲ್ಲಿ ನಮ್ಮೂರಿನ ಕಲಶದ ವ್ಯಾಜ್ಯವನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಿ, ಎರಡು ಗ್ರಾಮಗಳು ಒಂದಾಗಿ ಜಾತ್ರೆ ನೆರವೇರಿಸಲು ಅನುಕೂಲಮಾಡಿಕೊಟ್ಟಿದ್ದಾರೆ. ತೀರ್ಪಿನಿಂದ ಎರಡು ಗ್ರಾಮಗಳ ಗ್ರಾಮಸ್ಥರಿಗೆ ಸಂತೋಷವಾಗಿದೆ.
    -ವಸಂತರಾವ್ ಕೃಷ್ಣಮೂರ್ತಿ ಮುಡಪಲಜೀವಿ ಗ್ರಾಮದ ಮುಖಂಡರು





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts