ಬಾಗಲಕೋಟೆ: ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಅಧಿಕಾರಿಗಳು ಸದಾ ರೈತರೊಂದಿಗೆ ಸಂಪರ್ಕದಲ್ಲಿರಬೇಕು. ಅವರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹರಿಸುವ ಕೆಲಸ ಮಾಡಬೇಕು ಎಂದು ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಆರ್.ಶಂಕರ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ತೋವಿವಿಯ ಆವರಣದಲ್ಲಿರುವ ರೈತ ವಿಕಾಸ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತೋಟಗಾರಿಕೆ, ರೇಷ್ಮೆ ಬೆಳೆಗಾರರು ಹಾಗೂ ಅಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ರೈತರ ಪರವಾಗಿ ಕೆಲಸ ಮಾಡಬೇಕು. ರೈತರ ಸಮಸ್ಯೆ ಹಾಗೂ ಭಾವನೆಗಳನ್ನು ಅರ್ಥಮಾಡಿಕೊಂಡು ಸ್ಪಂದಿಸುವ ಕೆಲಸವಾದಾಗ ಮಾತ್ರ ಕೃಷಿ ಅಭಿವೃದ್ಧಿ ಹೊಂದುತ್ತದೆ ಎಂದರು.
ರಾಜ್ಯದಲ್ಲಿ ತೋಟಗಾರಿಕೆ ಬೆಳೆಯಿಂದ ಕೆಲವೊಂದು ರೈತರಿಗೆ ಲಾಭವಾದರೆ ಇನ್ನು ಕೆಲವು ರೈತರು ನಷ್ಟ ಅನುಭವಿಸುತ್ತಿದ್ದಾರೆ. ಇದನ್ನು ಸರಿದೂಗಿಸುವ ಕೆಲಸವಾಗಬೇಕು. ಸರ್ಕಾರದ ಪ್ರತಿಯೊಂದು ಯೋಜನೆ ತಲುಪಿಸಬೇಕು. ಹನಿ ನೀರಾವರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು.
ರೈತರ ಸಮಸ್ಯೆಗಳನ್ನು ಆಲಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದೇನೆ. ಸಮಸ್ಯೆ ಅರಿತು ಪರಿಹಾರಕ್ಕೆ ಒತ್ತು ನೀಡಲಾಗುವುದು. ಪ್ರಸ್ತುತ ಬಜೆಟ್ ಗಾತ್ರ ಕಡಿಮೆ ಇದೆ. ಈ ವರ್ಷ ಗಾತ್ರ ಹೆಚ್ಚಿಸಲಾಗುವುದು. ಇಸ್ರೇಲ್ ಮಾದರಿಯ ದಾಳಿಂಬೆ ಬೆಳೆ ಬೆಳೆಯಲು ರೈತರು ಮುಂದಾಗಬೇಕು ಎಂದರು.
ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ತೋವಿವಿಯ ಕುಲಪತಿ ಡಾ.ಕೆ.ಎಂ.ಇಂದಿರೇಶ, ತೋವಿವಿಯ ವಿಸ್ತರಣಾ ನಿರ್ದೇಶಕ ಡಾ.ಎಸ್.ಐ.ಅಥಣಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಹುಲ್ಕುಮಾರ ಬಾವಿದೊಡ್ಡಿ, ರೇಷ್ಮೆ ಇಲಾಖೆ ಉಪನಿರ್ದೇಶಕ ಎಸ್.ಬಿ.ಹುಲ್ಲೊಳ್ಳಿ, ತೋಟಗಾರಿಕೆ ಸಹಾಯಕ ನಿರ್ದೇಶಕ ಸುಭಾಷ ಸುಲ್ತಿ ಉಪಸ್ಥಿತರಿದ್ದರು.
ಶೀತಲ ಘಟಕ ಸ್ಥಾಪನೆಗೆ ಸರ್ಕಾರದಿಂದ ನೀಡುವ ಶೇ.30 ರಷ್ಟು ಸಹಾಯಧನ ತುಂಬಾ ಕಡಿಮೆಯಾಗಿದ್ದು, ಅದನ್ನು ಹೆಚ್ಚಿಸಬೇಕು. ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರೆಯುವಂತೆ ಮಾಡಬೇಕು.
–ಯಶವಂತ ಘೋರ್ಪಡೆ ಮುಧೋಳ ತಾಲೂಕಿನ ಶಿರೋಳ ಗ್ರಾಮದ ರೈತ
ಗೋಡಂಬಿ ಬೆಳೆಗೂ ಸಹಾಯಧನ ನೀಡಬೇಕು. ಮಾರಾಟವಾದ ರೇಷ್ಮೆ ಉತ್ಪನ್ನಕ್ಕೆ ಬೇಗನೆ ಪಾವತಿಯಾಗಬೇಕು. ಸರ್ಕಾರ ಕಾಲ ಕಾಲಕ್ಕೆ ಕೃಷಿಕರ ಸಮಸ್ಯೆ ಅರಿತು ಕಾರ್ಯಕ್ರಮ ರೂಪಿಸಬೇಕು.
–ಆನಂದ ಮೊಕಾಶಿ ಬೀಳಗಿಯ ರೈತ
ಕೃಷಿ ಯಂತ್ರಗಳ ಖರೀದಿಗೆ ಶೇ.50 ರಷ್ಟು ಸಹಾಯಧನ ನೀಡಬೇಕು. ಬೀಜ, ಗೊಬ್ಬರ ಕೊರತೆಯಾಗದಂತೆ ಎಚ್ಚರ ವಹಿಸಬೇಕು. ಗುಣಮಟ್ಟದ ಬೀಜ ವಿತರಣೆಗೆ ಕ್ರಮ ತೆಗೆದುಕೊಳ್ಳಬೇಕು.
–ಸಂಜೀವ ನಾಂದ್ರೇಕರ ಸಾವಳಗಿಯ ರೈತ