ಬಾದಾಮಿ: ಮತಕ್ಷೇತ್ರದಲ್ಲಿ ಅವಶ್ಯಕವಿರುವ ಕಡೆ ಅಭಿವೃದ್ಧಿ ಕಾಮಗಾರಿ ಹಾಕಿಕೊಳ್ಳಲಾಗುವುದು. ಜನರ ಸಮಸ್ಯೆಗೆ ಸ್ಪಂದಿಸಿ ಜನಪರ ಆಡಳಿತ ನೀಡಿ ಅಭಿವೃದ್ಧಿಗೆ ಮುನ್ನುಡಿ ಬರೆಯಲಾಗುವುದು ಎಂದು ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ಹೇಳಿದರು.
ತಾಲೂಕಿನ ಜಾಲಿಹಾಳ ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮೂಲ ಸೌಕರ್ಯ ಒದಗಿಸಲಾಗುವುದು. ನಾಗರಿಕರಿಗೆ ಅವಶ್ಯವಿರುವ ಕೆಲಸ ಗಳನ್ನು ಹಾಕಿಕೊಂಡು ಅನುಷ್ಠಾನಗೊಳಿಸಲಾಗುವುದು ಎಂದರು.
ಜಾಲಿಹಾಳ ಗ್ರಾಮದ ಸರ್ಕಾರಿ ಉರ್ದು ಶಾಲೆ ಕೊಠಡಿಗಳ ನಿರ್ಮಾಣಕ್ಕೆ 42.40 ಲಕ್ಷ ರೂ., ಗ್ರಾಮ ದೇವತಾ ಮಂಟಪಕ್ಕೆ 25 ಲಕ್ಷ ರೂ., ಈದ್ಗಾ ಹಾಗೂ ಸ್ಮಶಾನಕ್ಕೆ ತಡೆಗೋಡಿ ನಿರ್ಮಿಸಲು ತಲಾ 5 ಲಕ್ಷ ರೂ.ದಂತೆ ಒಟ್ಟು 77.40 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದು ಹೇಳಿದರು.
ಮಾಜಿ ಸಚಿವ, ಚಾಮರಾಜನಗರ ಶಾಸಕ ಜಮೀರ್ಅಹ್ಮದ್ ಖಾನ ಮಾತನಾಡಿದರು. ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಮಾಜಿ ಸಚಿವ ಬಿ.ಬಿ. ಚಿಮ್ಮನಕಟ್ಟಿ, ಹೊಳೆಬಸು ಶೆಟ್ಟರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಣ್ಣ ಯಲಿಗಾರ, ಮಹೇಶ ಹೊಸಗೌಡ್ರ, ಭೀಮಸೇನ ಚಿಮ್ಮನಕಟ್ಟಿ, ಎಂ.ಬಿ. ಹಂಗರಗಿ, ಪಿ.ಆರ್.ಗೌಡರ, ರಾಜಮಹ್ಮದ್ ಬಾಗವಾನ, ಲಕ್ಷ್ಮೀಬಾಯಿ ಪಾಟೀಲ, ಅಂಜುಮನ್ ಎ ಇಸ್ಲಾಂ ಕಮಿಟಿ ಅಧ್ಯಕ್ಷ ಅಬ್ದುಲ್ರಹಿಮಾನ ತಹಸೀಲ್ದಾರ್, ಸದಸ್ಯರು ಹಾಗೂ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.