ಬಾದಾಮಿ: ಉತ್ತರ ಕರ್ನಾಟಕ ಭಾಗದ ಆರಾಧ್ಯ ದೇವಿ, ಲಕ್ಷಾಂತರ ಭಕ್ತರ ಜಗನ್ಮಾತೆ ಸುಕ್ಷೇತ್ರ ಬನಶಂಕರಿದೇವಿ ಜಾತ್ರಾ ಮಹೋತ್ಸವದ ನವರಾತ್ರಿಯ ಘಟಸ್ಥಾಪನೆ ಜ.20 ರಂದು ನಡೆಯಲಿದೆ ಎಂದು ದೇವಸ್ಥಾನ ಟ್ರಸ್ಟ್ ಪದಾಧಿಕಾರಿ ಪ್ರಕಾಶ ಪೂಜಾರ ತಿಳಿಸಿದರು.
ಈ ಬಾರಿ ಜಾತ್ರಾ ಮಹೋತ್ಸವವನ್ನು ಕೋವಿಡ್- 19 ನಿಯಮಾವಳಿ ಪ್ರಕಾರ ಜಿಲ್ಲಾಡಳಿತ ರದ್ದುಪಡಿಸಿದ್ದು, ಧಾರ್ಮಿಕ ಪೂಜಾ ಕೈಂಕರ್ಯಗಳಿಗೆ ಮಾತ್ರ ಅವಕಾಶ ಮಾಡಿಕೊಟ್ಟಿದೆ ಎಂದು ಕಾನಿಪ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾರ್ವಜನಿಕ ಮತ್ತು ಭಕ್ತರ ಪ್ರವೇಶವನ್ನು ನಿಷೇಧಿಸಿರುವ ಜಿಲ್ಲಾಡಳಿತ ನಿತ್ಯ ದೇವಿಯ ಆರಾಧನೆಗೆ ಮತ್ತು ಪೂಜೆಗೆ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಕೇವಲ ಅರ್ಚಕ ಪೂಜಾರ ಮನೆತನದವರಿಗೆ ಅವಕಾಶವಿದ್ದು, ಯಾವುದೇ ಭಕ್ತರಿಗೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಟ್ರಸ್ಟಿ ಮಹೇಶ ಪೂಜಾರ ಮಾತನಾಡಿ, ಜ.27 ರಂದು ಪಲ್ಲೇದ ಹಬ್ಬ ಹಾಗೂ ಜ.28 ರಂದು ಬನದ ಹುಣ್ಣಿಮೆ ನಿಮಿತ್ತ ನವಚಂಡಿ ಹೋಮ ಇರುತ್ತದೆ. ಪ್ರತಿವರ್ಷ ಮಹಾ ರಥೋತ್ಸವ ಇರುತ್ತಿತ್ತು. ಈ ಬಾರಿ ಜಾತ್ರೆ ರದ್ದುಪಡಿಸಿದ್ದರ ಹಿನ್ನೆಲೆಯಲ್ಲಿ ಶೃಂಗರಿಸಿದ ರಥದಲ್ಲಿ ಶ್ರೀ ದೇವಿಯ ಉತ್ಸವ ಮೂರ್ತಿಯ ಆರೋಹಣ ನಡೆಯಲಿದೆ ಎಂದರು.
ಈ ಬಾರಿಯ ಜಾತ್ರಾ ಮಹೋತ್ಸವದ ಧಾರ್ಮಿಕ ವಿಧಿ ವಿಧಾನಗಳು, ಪೂಜಾ ಕೈಂಕರ್ಯಗಳು ಸೇರಿ ದೇವಿಯ ದರ್ಶನವನ್ನು ನಮ್ಮ ಟ್ರಸ್ಟ್ನ ವೆಬ್ಸೈಟ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಭಕ್ತರು ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಭಕ್ತರು ಮನೆಯಲ್ಲಿಯೇ ಕುಳಿತು ದೇವಿಯ ದರ್ಶನ ಪಡೆದು ಪುನೀತರಾಗಬೇಕೆಂದು ಮನವಿ ಮಾಡಿದರು.
ಟ್ರಸ್ಟಿ ಮಾಲತೇಶ ಪೂಜಾರ ಮಾತನಾಡಿ, ಹದಿನೈದು ದಿನದ ಜಾತ್ರೆ ನಿರ್ಬಂಧವು ಜಿಲ್ಲಾಧಿಕಾರಿಗಳ ಆದೇಶದಂತೆ ಜ.31 ಕ್ಕೆ ಮುಕ್ತಾಯವಾಗಲಿದ್ದು, ೆ.1 ರಿಂದ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಯಥಾವತ್ತಾಗಿ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಭಕ್ತರಲ್ಲಿ ವಿನಂತಿಸಿದರು.
ಕರೊನಾ ಮಹಾಮಾರಿ ವಿರುದ್ಧ ಇಡೀ ವಿಶ್ವವೇ ಹೋರಾಟ ಮಾಡುತ್ತಿದೆ. ಹೀಗಾಗಿ ನಾವು ಕೂಡ ಸರ್ಕಾರದ ಆದೇಶವನ್ನು ಪಾಲಿಸುವ ಮೂಲಕ ರೋಗವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗೋಣ. ಇದಕ್ಕೆ ಭಕ್ತರು ಹಾಗೂ ಸಾರ್ವಜನಿಕರು ಸಹಕರಿಸಬೇಕು.
– ರಮೇಶ ಪೂಜಾರ ದೇವಸ್ಥಾನ ಟ್ರಸ್ಟ್ ಪದಾಧಿಕಾರಿಗಳು