ಬೆಂಗಳೂರು: ಮಾಜಿ ಕಾರ್ಪೋರೇಟರ್ ಪುತ್ರ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅತ್ತಿಗುಪ್ಪೆ ನಿವಾಸಿ ಗೌತಮ್(29) ಮೃತ ಯುವಕ. ಗುರುವಾರ ಮಧ್ಯಾಹ್ನ 1 ಗಂಟೆಯಲ್ಲಿ ಊಟಕ್ಕೆ ಕರೆಯಲು ಕೊಠಡಿಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅತ್ತಿಗುಪ್ಪೆ ವಾರ್ಡ್ ಮಾಜಿ ಕಾರ್ಪೋರೇಟರ್ ಕೆ. ದೊಡ್ಡಣ್ಣ ಅವರ ಪುತ್ರ ಗೌತಮ್, ಯಾವುದೇ ಕೆಲಸ ಮಾಡುತ್ತಿರಲಿಲ್ಲ. 3-4 ತಿಂಗಳಿಂದ ಮಾನಸಿಕವಾಗಿ ಕುಗ್ಗಿದ್ದ ಗೌತಮ್, ಯಾರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ. ಇತ್ತೀಚೆಗೆ ಮದುವೆ ಮಾಡಿಕೊಳ್ಳುವುದಾಗಿ ಪಾಲಕರ ಬಳಿ ಹೇಳಿಕೊಂಡಿದ್ದ. ನಾಲ್ಕೈದು ಯುವತಿಯರ ಫೋಟೋಗಳನ್ನು ತೋರಿಸಿದ್ದರು. ಓರ್ವ ಯುವತಿ ಫೋಟೋ ನೋಡಿ ಒಪ್ಪಿಕೊಂಡಿದ್ದ. ಇದರ ನಡುವೆ ಬುಧವಾರ ಮಧ್ಯಾಹ್ನ 1 ಗಂಟೆಯಲ್ಲಿ ಊಟ ಮಾಡಿಕೊಂಡು ತನ್ನ ಕೊಠಡಿಗೆ ಹೋಗಿದ್ದ. ರಾತ್ರಿ ಊಟಕ್ಕೆ ಮತ್ತು ಗುರುವಾರ ಬೆಳಗ್ಗೆ ತಿಂಡಿ ತಿನ್ನಲು ಬಂದಿರಲಿಲ್ಲ.
ಮಧ್ಯಾಹ್ನ 1.30ರಲ್ಲಿ ಗೌತಮ್ನನ್ನು ಕರೆಯುವಂತೆ ಆತನ ಸಹೋದರನಿಗೆ ಪಾಲಕರು ಹೇಳಿದ್ದರು. ರೂಮ್ ಬಳಿಗೆ ಹೋಗಿ ನೋಡಿದಾಗ ಲಾಕ್ ಆಗಿರುತ್ತದೆ. ಮೊಬೈಲ್ ಸಹ ಸ್ವೀಚ್ ಆಗಿದ್ದು, ಕೊನೆಗೆ ಕೊಠಡಿ ಬಾಗಿಲು ಹೊಡೆದು ಒಳಗೆ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಗೌತಮ್ ಶವ ಪತ್ತೆಯಾಗಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ಕೆ.ದೊಡ್ಡಣ್ಣ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಂದ್ರಾ ಲೇಔಟ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.