ಕೃಷ್ಣಾ: ಪ್ರೀತಿಗೆ ಎಲ್ಲೆಯಿಲ್ಲ ಅಂತಾರೆ. ಜಾತಿ ಬೇಧ ನೋಡದೆ ಚಿಕ್ಕ ಪರಿಚಯವೊಂದು ಕೊಂಚ ಪ್ರೀತಿಗೆ ತಿರುಗುತ್ತಿದೆ. ಆಂಧ್ರದ ಯುವಕನೊಬ್ಬ ತೈವಾನ್ ಯುವತಿಯನ್ನು ಸಂಪ್ರದಾಯಬದ್ಧವಾಗಿ ಮದುವೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ದೇವರಕೋಟಾದ ಚಲ್ಲಪಲ್ಲಿಯಲ್ಲಿ ನಡೆದಿದೆ.
ವೇಮುರಿ ಕಿಶೋರ್ ಎಂಬುವವರು ಚಲ್ಲಪಲ್ಲಿಯಲ್ಲಿ ಮೆಡಿಕಲ್ ಶಾಪ್ ನಡೆಸುತ್ತಿದ್ದು, ಅವರ ಮಗ ಸಾಯಿ ದಿನಕರ್ ತೈವಾನ್ನ ಹ್ಸಿಂಚುನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ. ಈ ವೇಳೆ ಆತನಿಗೆ ಅಲ್ಲಿನ ಫಿಸಿಯೋಥೆರಪಿಸ್ಟ್ ಯುಟಿಂಗ್ ಲಿಯು ಎಂಬಾಕೆಯ ಪರಿಚಯವಾಗಿದ್ದು, ಇಬ್ಬರು ನಡುವೆ ಪ್ರೇಮಾಂಕುರವಾಗಿದೆ. ಕೊನೆಗೆ ಇಬ್ಬರು ಮದುವೆಯಾಗಲು ನಿಶ್ಚಿಯಿಸಿ ಮನೆಯಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ.
ಇಬ್ಬರ ಪ್ರೀತಿಗೆ ಎರಡು ಮನೆಯವರು ಒಪ್ಪಿಗೆ ನೀಡಿದ್ದು, ರವಿವಾರದಂದು ದ್ವಾರಕಾ ತಿರುಮಲದಲ್ಲಿ ಈ ಜೋಡಿ ಹಿಂದೂ ವಿವಾಹ ಸಂಪ್ರದಾಯದಂತೆ ಸಪ್ತಪದಿ ತುಳಿದಿದೆ. ಘಂಟಸಾಲ ಮಂಡಲದ ದೇವರಕೋಟದಲ್ಲಿ ಸೋಮವಾರದಂದು ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ನಡೆದಿದ್ದು, ಈ ಸಮಾರಂಭಕ್ಕೆ ವಧುವಿನ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ತೈವಾನ್ನಿಂದ ಬಂದಿದ್ದರು. ಈ ವೇಳೆ ಮಹಿಳೆಯರು ರೇಷ್ಮೆ ಸೀರೆ ಮತ್ತು ಪುರುಷರು ರೇಷ್ಮೆ ಪಂಚೆಗಳನ್ನು ಧರಿಸಿ, ಎಲ್ಲರ ಗಮನ ಸೆಳೆದಿದ್ದಾರೆ.(ಏಜೆನ್ಸೀಸ್)