ಬೆಂಗಳೂರು: ರಾಜ್ಯದಲ್ಲಿ 10 ಎಕರೆ ವರೆಗಿನ ಜಮೀನು ಮಂಜೂರಾತಿ ಹಾಗೂ 15 ರಿಂದ 500 ಕೋಟಿ ರೂ. ಬಂಡವಾಳ ಹೂಡಿಕೆ ಪ್ರಸ್ತಾವನೆಗಳನ್ನು ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿ ಮುಂದೆ ಮಂಡಿಸಲು ಸರ್ಕಾರ ಸೂಚನೆ ನೀಡಿದೆ.
ಈ ಹಿಂದೆ ಭೂ ಪರಿಶೀಲನಾ ಸಮಿತಿ ಮುಂದೆ ಮಂಡಿಸಲಾಗುತ್ತಿತ್ತು. ಇನ್ನು ಮುಂದೆ ರಾಜ್ಯಮಟ್ಟದ ಸಮಿತಿ ಮುಂದೆ ಮಂಡಿಸಲು ಸುತ್ತೋಲೆ ಹೊರಡಿಸಲಾಗಿದೆ. ಎರಡು ಎಕರೆವರೆಗಿನ ವಿಸ್ತೀರ್ಣದ ಹಾಗೂ 15 ಕೋಟಿ ರೂ. ವರೆಗಿನ ಬಂಡವಾಳದ ಪ್ರಸ್ತಾವನೆಗಳನ್ನು ಆಯಾ ಜಿಲ್ಲಾ ಮಟ್ಟಿದ ಏಕಗವಾಕ್ಷಿ ಅನುಮೋದನಾ ಸಮಿತಿ ಮಂಡಿಸಿ ಅನುಮೋದನೆ ಪಡೆಯಬಹುದು.
ಹತ್ತು ಎಕರೆವರೆಗಿನ ವಿಸ್ತೀರ್ಣದ ಹಾಗೂ 15 ರಿಂದ 500 ಕೋಟಿ ರೂ.ವರೆಗಿನ ಬಂಡವಾಳದ ಪ್ರಸ್ತಾವನೆಗಳನ್ನು ಭೂ ಪರಿಶೀಲನಾ ಸಮಿತಿ ಮುಂದೆ ಮಂಡಿಸದೆ ನೇರವಾಗಿ ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿ ಮುಂದೆ ಪರಿಶೀಲನೆಗಾಗಿ ಮಂಡಿಸಲು ತಿಳಿಸಲಾಗಿದೆ.
ರಾಜ್ಯ ಉನ್ನತಮಟ್ಟದ ಅನುಮೋದನಾ ಸಮಿತಿಯ ಮುಂದೆ ಮಂಡಿಸುವ ಎಲ್ಲ ಪ್ರಸ್ತಾವನೆಗಳನ್ನು ಭೂ ಪರಿಶೀಲನಾ ಸಮಿತಿಯ ಮುಂದೆ ಮಂಡಿಸಿ, ಅದರ ನಿರ್ಣಯದಂತೆ ರಾಜ್ಯ ಉನ್ನತ ಮಟ್ಟದ ಅನುಮೋದನಾ ಸಮಿತಿ ಅನುಮೋದನೆಗೆ ಮಂಡಿಸುವಂತೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಎಲ್ಲ ಇಲಾಖೆ ಮುಖ್ಯಸ್ಥರಿಗೆ ಸೂಚಿಸಿದೆ.