ಅಳವಂಡಿ: ಪ್ರತಿಯೊಬ್ಬರೂ ಸೌಹಾರ್ದಯುತ ಜೀವನ ನಡೆಸಬೇಕು ಎಂಬುದೇ ಸರ್ವಧರ್ಮಗಳ ಉದ್ದೇಶವಾಗಿದೆ. ಮಹಾತ್ಮರ ಸಂದೇಶಗಳು ಸಹ ಅದನ್ನೇ ಸಾರಿದ್ದು, ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಅಳವಂಡಿ ಸಿದ್ಧೇಶ್ವರ ಮಠದ ಶ್ರೀ ಮರುಳಾರಾಧ್ಯ ಶಿವಾಚಾರ್ಯರು ಹೇಳಿದರು.
ಕವಲೂರು ಗ್ರಾಮದಲ್ಲಿ ಪೀರಾನೆ, ಪೀರ ದಸ್ತಗೀರ ಮೆಹಬೂಬ ಸುಬಾನಿ ನೂತನ ದರ್ಗಾ ಉದ್ಘಾಟನೆ ಹಾಗೂ 21ನೇ ಉರುಸ್ಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು. ದ್ವೇಷದಿಂದ ಒಬ್ಬರನ್ನು ಕಳೆದುಕೊಂಡರೆ, ಪ್ರೀತಿಯಿಂದ ಎಲ್ಲರನ್ನೂ ಗೆಲ್ಲಬಹುದು. ಸಮನ್ವಯ, ಸಹನೆ, ಭಾವೈಕ್ಯ ಮೈಗೂಸಿಕೊಂಡರೆ ಸರ್ವರೂ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ವಿಜಯಪುರದ ಮುಸ್ಲಿಂ ಧರ್ಮಗುರು ಮೆಹರಾಜ ಹಾಸಿಮ್ಪೀರ್ ಮಾತನಾಡಿ, ದೇಶದಲ್ಲಿ ಹಲವಾರು ಧರ್ಮ, ಭಾಷೆ, ಜಾತಿ, ಮತಗಳಿದ್ದರೂ ನಾವೆಲ್ಲ ಒಂದು ಎಂಬ ಭಾವ ಹೊಂದಬೇಕು. ಮಹಾತ್ಮರು, ಶರಣರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು. ಹಂಪಸಾಗರದ ಶಿವಲಿಂಗ ರುದ್ರಮುನಿ ಶಿವಾಚಾರ್ಯರು ಹಾಗೂ ಕೊಂಬಳಿಯ ಚೌಕಿಮಠದ ಶ್ರೀಗಾಡಿ ತಾತ, ಮುಖಂಡ ಪ್ರದೀಪಗೌಡ ಮಾಲಿಪಾಟೀಲ್ ಮಾತನಾಡಿದರು. ನಂತರ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಶಾಹೀದ್ ತಹಶೀಲ್ದಾರ್, ದೇವಪ್ಪ ಹಳ್ಳಿ, ಮಲ್ಲಣ್ಣ, ನಜೀರ್ ಅಹಮದ್, ಸೋಮಶೇಖರಗೌಡ, ಮೈನು, ನಾಗರಾಜ ಕಗ್ಗಲ್, ನೀಲಪ್ಪ, ವಿರೂಪಾಕ್ಷಿ, ಮುತ್ತಣ್ಣ, ಪ್ರದೀಪ, ತಿಮ್ಮಣ್ಣ, ವೀರಪ್ಪ, ಹನುಮಂತ, ಶೇಖರಪ್ಪ, ಸೈಯದ್, ಈಶಪ್ಪ, ವೀರೇಶ, ನಾಗಪ್ಪ, ಹಾಸಿಂ, ಯಮನೂರಸಾಬ್ ಇತರರಿದ್ದರು.