ಅಳವಂಡಿ: ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಭೂಮಿ ಕಳೆದುಕೊಂಡವರಿಗೆ ಪರಿಹಾರ ಸಿಕ್ಕಿಲ್ಲ. ರೈತರು ಅವರ ಹಕ್ಕಿಗಾಗಿ ಹೋರಾಟ ಮಾಡುತ್ತಿರುವುದು ದುರದೃಷ್ಟಕರ ಎಂದು ಸ್ರೀ ಸಿದ್ಧೇಶ್ವರ ಮಠದ ಮರುಳಾರಾಧ್ಯ ಸ್ವಾಮೀಜಿ ಹೇಳಿದರು.
ಭೂ ಪರಿಹಾರ ಹಾಗೂ ಯೋಜನೆಯ ವಿಳಂಬ ಖಂಡಿಸಿ ಗ್ರಾಮದ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಎಇಇ ಕಚೇರಿ ಮುಂದೆ ಯೋಜನೆ ಅನುಷ್ಠಾನ ಹೋರಾಟ ಸಮಿತಿ ಸೋಮವಾರ ಆರಂಭಿಸಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಮಾತನಾಡಿದರು.
ಮುಖಂಡ ಈಶಪ್ಪ ಜೋಳದ ಮಾತನಾಡಿ, ಯೋಜನೆ ಕಾಮಗಾರಿ ಮುಗಿದು ದಶಕ ಕಳೆದರೂ ರೈತರ ಜಮೀನುಗಳಿಗೆ ನೀರು ಹರಿದಿಲ್ಲ. ಭೂಮಿ ಕಳೆದುಕೊಂಡ ಅಳವಂಡಿ, ಮೈನಳ್ಳಿ, ಬಿಕನಳ್ಳಿ, ಕವಲೂರು ಹಾಗೂ ಇತರ ಗ್ರಾಮಗಳ ರೈತರಿಗೆ ಪರಿಹಾರ ಸಿಕ್ಕಿಲ್ಲ. ಜನಪ್ರತಿನಿಧಿಗಳು ನಿರ್ಲಕ್ಷೃ ವಹಿಸಿದ್ದು ರೈತರು ಪರಿಹಾರಕ್ಕಾಗಿ ಅಲೆದಾಡುವಂತಾಗಿದೆ. ಸರ್ಕಾರ ಕೂಡಲೇ ರೈತರಿಗೆ ಪರಿಹಾರ ಹಣ ಬಿಡುಗಡೆ ಮಾಡಬೇಕು ಹಾಗೂ ಜಮೀನುಗಳಿಗೆ ನೀರು ಹರಿಸಬೇಕು. ಸಂಬಂಧಿಸಿದವರಿಂದ ಖಚಿತ ಭರವಸೆ ಸಿಗುವವರೆಗೂ ಹೋರಾಟ ಮುಂದುವರಿಸಲಾಗುವುದು ಎಂದರು.
ಮುಖಂಡ ನಾಗಪ್ಪ ಸವಡಿ ಮಾತನಾಡಿ, ಸರ್ಕಾರ ನೀರಾವರಿ ಯೋಜನೆ ಬಗ್ಗೆ ನಿರ್ಲಕ್ಷೃ ವಹಿಸಿದೆ ಎಂದು ಆರೋಪಿಸಿದರು. ಬಿಕನಳ್ಳಿ-ಮೈನಳ್ಳಿ ಶ್ರೀಸಿದ್ಧೇಶ್ವರ ಸ್ವಾಮೀಜಿ, ಪ್ರಮುಖರಾದ ಗುರುಮೂರ್ತಿ ಸ್ವಾಮಿ ಇನಾಮದಾರ, ದೇವಪ್ಪ ಕಟ್ಟಿಮನಿ, ಭೀಮರಡ್ಡಿ ಗದ್ದಿಕೇರಿ, ಡಾ.ಸಿದ್ದಲಿಂಗಸ್ವಾಮಿ ಇನಾಮದಾರ, ರಮೇಶ ಭಾವಿಹಳ್ಳಿ, ಅನ್ವರ ಗಡಾದ, ವಸಂತ ಗದ್ದಿಕೇರಿ, ಶರಣಪ್ಪ ಜಡಿ, ವೆಂಕಣ್ಣ, ಹನುಮಂತಗೌಡ, ಪರಪ್ಪ, ದೇವರಡ್ಡಿ ಹಾಗೂ ಇತರ ಗ್ರಾಮಗಳ ರೈತರು ಭಾಗವಹಿಸಿದ್ದರು.