ರಿಪ್ಪನ್ಪೇಟೆ: ಆರೋಗ್ಯವಂತರಾಗಿರಲು ದೈಹಿಕವಾಗಿ ಸಬಲರಾಗಿರಬೇಕು. ಸತ್ವಯುತ ಆಹಾರ ಸೇವನೆಯಿಂದ ರಕ್ತ ಸಂಚಲನೆ ಸಮರ್ಪಕವಾಗಿ ಆಗುತ್ತದೆ. ಸಹಜವಾಗಿ ಸೇವಿಸುವ ಆಹಾರದಲ್ಲಿ ವಿಟಮಿನ್, ಕಬ್ಬಿಣದ ಅಂಶ ಇರಬೇಕು. ವೈದ್ಯರ ಸಲಹೆಯಂತೆ ಆರೋಗ್ಯವಂತರ ರಕ್ತವನ್ನು ತುರ್ತು ಸಂದರ್ಭದಲ್ಲಿ ದಾನ ಮಾಡಬೇಕು ಎಂದು ಹೊಂಬುಜ ಜೈನ ಮಠದ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿ ಹೇಳಿದರು.
ಹೊಂಬುಜದ ರಂಗರಾವ್ ಸ್ಮಾರಕ ಸಭಾಭವನದಲ್ಲಿ ಶನಿವಾರ ರಿಪ್ಪನಪೇಟೆ ಪೊಲೀಸ್ ಠಾಣೆ, ಸೂರ್ತಿ ಸ್ಪೋರ್ಟ್ಸ್ ಕ್ಲಬ್ ಹುಂಚ ಹಾಗೂ ಮಾಜಿ ಸೈನಿಕರು ಹಾಗೂ ಶಿವಮೊಗ್ಗ ಆಶಾ ಜ್ಯೋತಿ ರಕ್ತಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಆಶೀರ್ವಚನ ನೀಡಿದರು.
ರಕ್ತದಾನಿಗಳ ಸಂಖ್ಯೆ ಹೆಚ್ಚಾಗಲು ಎಲ್ಲರೂ ಸದೃಢ ಶಾರೀರಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ರಕ್ತದಾನಿಗಳಿಗೆ, ಸಂಯೋಜಕರಿಗೆ ಪುಣ್ಯಪ್ರಾಪ್ತಿಯಾಗಲಿ ಎಂದು ಶ್ರೀಗಳು ಹರಸಿದರು. ಪಿಎಸ್ಐ ಎಸ್.ಪಿ.ಪ್ರವೀಣ್, ಹಾಲೇಶ್, ಅಲಾಜ್, ಬಿ.ಯು.ಸೋಮಶೇಖರ್, ಉಮೇಶ್, ಮಧುಸೂದನ್, ದೇವೇಂದ್ರ, ಜೆ.ಪ್ರಹ್ಲಾದ್ ಹಾಗೂ ಮಾಜಿ ಸೈನಿಕರಿದ್ದರು. ಒಟ್ಟು ೫೫ ಜನ ರಕ್ತದಾನ ಮಾಡಿದರು.