ತರೀಕೆರೆ: ಕ್ಷೇತ್ರದ 6 ಸಾವಿರ ಲಾನುಭವಿಗಳಿಗೆ ಸೂಕ್ತ ಜಾಗದಲ್ಲಿ ನಿವೇಶನ ಹಂಚಿ ಹಕ್ಕುಪತ್ರ ಕೊಡಿಸಿಕೊಡಲಾಗುವುದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ಯರೇಹಳ್ಳಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ 17 ಲಕ್ಷ ರೂ. ಅನುದಾನ ಬಳಸಿ ನಿರ್ಮಿಸಿರುವ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಶನಿವಾರ ಉದ್ಘಾಟಿಸಿ ಮಾತನಾಡಿ, ಯರೇಹಳ್ಳಿಯಲ್ಲಿ ಎಂಯುಎಸ್ಎಸ್ ಘಟಕ ಸ್ಥಾಪನೆಗೆ ಯೋಜನೆ ಅಂತಿಮಗೊಂಡಿದ್ದು, ಸದ್ಯದಲ್ಲೇ ಟೆಂಡರ್ ಕರೆಯಲಾಗುವುದು ಎಂದರು.
ತಾಪಂ ಇಒ ಎಸ್.ಗೀತಾ ಮಾತನಾಡಿ, ತಾಲೂಕಿನ 26 ಗ್ರಾಪಂಗಳಲ್ಲಿ ಸ್ವಚ್ಛ ಸಂಕೀರ್ಣ ನಿಮಾರ್ಣ ಮಾಡಲಾಗಿದೆ. ಅಲ್ಲಿ ವಿಲೇವಾರಿ ಮಾಡಿ ಬೇರ್ಪಡಿಸುವುದು ಮಾತ್ರವಲ್ಲ, ಮರು ಬಳಸಬಹುದಾದ ತ್ಯಾಜ್ಯವನ್ನು ಪುರಸಭೆ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ರವಾನಿಸುವ ವ್ಯವಸ್ಥೆ ಮಾಡಲಾಗಿದೆ. ಪ್ಲಾಸ್ಟಿಕ್ ಬಳಕೆ ನಿಷೇಧಿಸಿದರೆ ಅಂತರ್ಜಲ ಮಟ್ಟ ಹೆಚ್ಚುವುದಲ್ಲದೆ ಕ್ಯಾನ್ಸರ್ನಂಥ ಮಾರಕ ಕಾಯಿಲೆ ತಡೆಗಟ್ಟಲು ಸಾಧ್ಯವಾಗಲಿದೆ. ಸರ್ವ ಸದಸ್ಯರ ಶ್ರಮದಿಂದ ಹಾದಿಕೆರೆ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದ್ದು, ಗ್ರಾಪಂ ಅಭಿವೃದ್ಧಿಗೆ ಸಾಂಘಿಕ ಪ್ರಯತ್ನ ಮುಖ್ಯವಾಗಲಿದೆ ಎಂದು ಹೇಳಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಟಿ.ಎಸ್.ಗಣೇಶ್ ಮಾತನಾಡಿ, ಸ್ವಚ್ಛ ಸಂಕೀರ್ಣ ಘಟಕ ಸ್ಥಾಪನೆಯಾಗುತ್ತಿರುವುದರಿಂದ ಸ್ವ ಸಹಾಯ ಗುಂಪಿನ ಮಹಿಳೆಯೊಬ್ಬರಿಗೆ ಉದ್ಯೋಗ ಸಿಗಲಿದೆ ಎಂದರು.
ಅಧ್ಯಕ್ಷೆ ರೇಖಾ ರವೀಶಯ್ಯ, ಉಪಾಧ್ಯಕ್ಷೆ ರತ್ನಮ್ಮ, ಸದಸ್ಯರಾದ ಎಚ್.ಎಸ್.ರಾಜಪ್ಪ, ಎನ್.ಎಸ್.ವಸಂತ್ಕುಮಾರ್, ಚಂದ್ರಮೌಳಿ, ಅರುಣ್ಕುಮಾರ್, ಕಿರಣ್ಕುಮಾರ್, ನಾಗಮ್ಮ, ಅಂಬಿಕಾ, ಪಿಡಿಒ ಎನ್.ಭೈರೇಶ್ ಇತರರಿದ್ದರು.