ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆ ಎದುರು ಯೂಟರ್ನ್ ತೆಗೆದುಕೊಳ್ಳುವಾಗ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಫಲಿಸದೇ ಮೃತಪಟ್ಟ ತಾಲೂಕಿನ ನಾರಾಯಣಪುರದ ರಾಜೇಶ್ ನಾಯ್ಕ(24)ನ ಎರಡೂ ಕಣ್ಣುಗಳನ್ನು ಪಾಲಕರು ಸಿಮ್ಸ್ (ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ)ಗೆ ದಾನ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಅಂತಿಮ ವರ್ಷದ ಪರೀಕ್ಷೆ ಬರೆದು ಶಿವಮೊಗ್ಗಕ್ಕೆ ಆಗಮಿಸಿದ್ದ ರಾಜೇಶ್ ನಾಯ್ಕ, ಜು.1ರಂದು ನಾರಾಯಪುರದಿಂದ ಶಿವಮೊಗ್ಗಕ್ಕೆ ಬೈಕ್ನಲ್ಲಿ ಬಂದಿದ್ದ. ಹಳೇ ಮೆಗ್ಗಾನ್ ಆಸ್ಪತ್ರೆ ಎದುರು ಯೂಟರ್ನ್ ತೆಗೆದುಕೊಳ್ಳುವಾಗ ಅಶೋಕ ವೃತ್ತದಿಂದ ಬೈಕ್ನಲ್ಲಿ ಅತಿವೇಗವಾಗಿ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿತ್ತು.
ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ರಾಜೇಶ್ ನಾಯ್ಕನನ್ನು ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿಂದ ಪುನಃ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇತ್ತೀಚೆಗೆ ಮೃತಪಟ್ಟಿದ್ದು ಪಾಲಕರು ಆತನ ಕಣ್ಣುಗಳನ್ನು ಸಿಮ್ಸ್ಗೆ ದಾನ ಮಾಡಿದ್ದು ಪುತ್ರನ ಸಾವಿನಲ್ಲೂ ಪಾಲಕರು ಮಾನವೀಯತೆ ಮೆರೆದಿದ್ದಾರೆ.