ಗೋಣಿಕೊಪ್ಪ: ಮಾನಸಿಕ ನಿಯಂತ್ರಣದಿಂದ ಏಡ್ಸ್ ನಿಯಂತ್ರಣ ಸಾಧ್ಯ ಎಂದು ಇಲ್ಲಿನ ಕಾವೇರಿ ಕಾಲೇಜಿನ ಪ್ರಾಂಶುಪಾಲ ಡಾ.ಕಾವೇರಪ್ಪ ಅಭಿಪ್ರಾಯ ಪಟ್ಟರು.
ವಿಶ್ವ ಏಡ್ಸ್ ಮತ್ತು ಸಂವಿಧಾನ ದಿನ ಅಂಗವಾಗಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ರಾಜ್ಯಶಾಸ್ತ್ರ ವಿಭಾಗದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹದಿಹರೆಯದ ವಯಸ್ಸಿನಲ್ಲಿ ಯುವಜನರು ತಪ್ಪು ಮಾಡಿ ಏಡ್ಸ್ಗೆ ತುತ್ತಾಗುತ್ತಿದ್ದಾರೆ. ಅಂತೆಯೆ ಸಂವಿಧಾನ ತಿಳಿಯದೆ ಕಾನೂನಿನ ಅರಿವಿಲ್ಲದಂತಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಈ ಎರಡನ್ನೂ ಸಂಪನ್ಮೂಲ ವ್ಯಕ್ತಿಗಳಿಂದ ಸರಿಯಾಗಿ ತಿಳಿದುಕೊಳ್ಳಬೇಕು ಎಂದರು.
ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕಿ ಪ್ರೊ.ಎಂ.ಬಿ.ದಿವ್ಯಾ ಮಾತನಾಡಿ, ಸಂವಿಧಾನ ರಚನೆಗೆ ಅನೇಕರು ಹಲವು ವರ್ಷ ಶ್ರಮಿಸಿದರು. ಅದರ ಪರಿಣಾಮ ಭಾರತಕ್ಕೆ ದೊಡ್ಡ ಸಂವಿಧಾನ ದೊರಕಿದೆ. ಆದರೆ ಇಂದು ಸಂವಿಧಾನ ಮತ್ತು ರಚನೆ ಬಗ್ಗೆ ವಿವಿಧ ವರ್ಗದ ಜನರು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸುವುದು ಬೇಸರದ ಸಂಗತಿ ಎಂದರು.
ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಂಚಾಲಕ ಎನ್.ಸಿ.ಚಂದ್ರಶೇಖರ್ ಮಾತನಾಡಿ, ಏಡ್ಸ್ ಅನ್ನು ಹತ್ತು ವರ್ಷದ ಹಿಂದೆ ಮಾರಕ ಕಾಯಿಲೆ ಎನ್ನಲಾಗುತ್ತಿತ್ತು. ಅದರೆ ಈಗ ಏಡ್ಸ್ ತಡೆಗಟ್ಟಲು ಹಲವು ಸುರಕ್ಷಿತ ಮಾರ್ಗಗಳಿವೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎನ್ನೆಸ್ಸೆಸ್ಸ್ ಅಧಿಕಾರಿ ಎನ್.ಪಿ.ರೀತಾ ಮಾತನಾಡಿ, ಹದಿಹರೆಯದ ವಯಸ್ಸಿನಲ್ಲಿ ಯುವಜನರು ದಾರಿ ತಪ್ಪುವುದರಿಂದ ಏಡ್ಸ್ ಬರುತ್ತದೆ. ಈ ಬಗ್ಗೆ ವಿದ್ಯಾರ್ಥಿಗಳು ಎಚ್ಚರಿಕೆ ವಹಿಸುವುದು ಅವಶ್ಯಕ ಎಂದರು.
ಎನ್ನೆಸ್ಸ್ಸ್ಸ್ ಅಧಿಕಾರಿ ವನಿತ್ಕುಮಾರ್, ರಾಜ್ಯಶಾಸ್ತ್ರ ಉಪನ್ಯಾಸಕಿ ಕಾವ್ಯಾ ಮತ್ತಿತರರು ಉಪಸ್ಥಿತರಿದ್ದರು.