ಮುಂಡರಗಿ: ಗಾಳಿ- ಮಳೆಗೆ ನೆಲಕಚ್ಚಿದ ಬಾಳೆ ತೋಟಗಳಿಗೆ ತೋಟಗಾರಿಕೆ ಸಹಾಯಕ ಅಧಿಕಾರಿ ನಿಂಗಪ್ಪ ಕುಂಬಾರ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೈತರ ಜತೆಗೆ ಚರ್ಚಿಸಿ ಹಾನಿಯ ಮಾಹಿತಿ ಪಡೆದುಕೊಂಡರು.
ಮಂಗಳವಾರ ಮತ್ತು ಬುಧವಾರ ಡಂಬಳ ಭಾಗದಲ್ಲಿ ಭಾರಿ ಗಾಳಿ ಮಳೆಯಾಗಿತ್ತು. ಅನೇಕ ರೈತರ ತೋಟಗಳಲ್ಲಿ ಅಪಾರ ಪ್ರಮಾಣದಲ್ಲಿ ಬಾಳೆ ಬೆಳೆ ಹಾನಿಗೊಳಗಾಗಿತ್ತು. ಹೀಗಾಗಿ ತೋಟಗಾರಿಕೆ ಸಹಾಯಕ ಅಧಿಕಾರಿ ಭೇಟಿ ನೀಡಿದರು. ಈ ವೇಳೆ ರೈತರೊಂದಿಗೆ ಚರ್ಚಿಸಿ ಹಾನಿಗೊಂಡ ಕುರಿತು ಸಂಪೂರ್ಣ ಮಾಹಿತಿ ಸಂಗ್ರಹಿಸಿದರು. ಗಾಳಿ ಮಳೆಗೆ ಬಾಳೆ ಬೆಳೆ ನೆಲಕಚ್ಚಿದ್ದರಿಂದ ರೈತರು ತೀವ್ರ ನಷ್ಟ ಅನುಭವಿಸುವಂತಾಗಿದೆ. ಈ ಬಗ್ಗೆ ಅಧಿಕಾರಿಗಳು ಪರಿಹಾರ ಕಲ್ಪಿಸಿಕೊಡಬೇಕು ಎಂದು ರೈತರು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ತೋಟಗಾರಿಕೆ ಸಹಾಯಕ ಅಧಿಕಾರಿ ನಿಂಗಪ್ಪ ಅವರು, ಹಾನಿಯಾದ ಬಾಳೆ ಬೆಳೆಯನ್ನು ಪರಿಶೀಲಿಸಲಾಗಿದೆ. ಈ ಬಗ್ಗೆ ವರದಿ ತಯಾರಿಸಿ ಮೇಲಾಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.