ಚನ್ನಪಟ್ಟಣ: ಸಾಲ ಮಾಡಿದ್ರೂ ಚಿಂತೆಯಿಲ್ಲ, ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಲ್ಲೇ ಓದಿಸಬೇಕು ಎಂಬ ಮನಸ್ಥಿತಿಯುಳ್ಳ ಜನರೇ ಹೆಚ್ಚು. ಬೇಬಿ ಸಿಟ್ಟಿಂಗ್ಸ್, ಕಿಂಡರ್ ಗಾರ್ಡನ್ಗಳ ವ್ಯಾಮೋಹಕ್ಕೆ ಒಳಗಾದವರೇ ಜಾಸ್ತಿ. ಅಂತಹವರ ನಡುವೆ ಬೊಂಬೆನಾಡು ಚನ್ನಪಟ್ಟಣದ ನ್ಯಾಯಾಧೀಶರು ವಿಭಿನ್ನವಾಗಿ ನಿಲ್ಲುತ್ತಾರೆ. ತನ್ನ ಮಗನನ್ನು ಸರ್ಕಾರಿ ಅಂಗನವಾಡಿಗೆ ಸೇರಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ನ್ಯಾಯಾಧೀಶರ ಈ ನಡೆ ಕಂಡು ಸ್ಥಳೀಯರು ಹುಬ್ಬೇರಿಸಿದ್ದಾರೆ.
ಇಂತಹ ಆಶಾದಾಯಕ ಬೆಳವಣಿಗೆ ರಾಮನಗರ ಜಿಲ್ಲೆ ಚನ್ನಪಟ್ಟಣ ನಗರದಲ್ಲಿ ಸಂಭವಿಸಿದೆ. ಚನ್ನಪಟ್ಟಣ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ. ಮಹೇಂದ್ರ ಅವರು ತನ್ನ ಮೂರೂವರೆ ವರ್ಷದ ಮಗ ಎಚ್.ಎಂ.ನಿದರ್ಶ್ ಎಂಬಾತನನ್ನು ಮಂಗಳವಾರ ಕೋಟೆ ಆಂಜನೇಯ ದೇವಾಲಯ ಬಳಿಯ ಸರ್ಕಾರಿ ಅಂಗನವಾಡಿಗೆ ಸೇರಿಸಿದರು. ಈ ವೇಳೆ ನ್ಯಾಯಾಧೀಶರ ಪತ್ನಿಯೂ ಆಗಮಿಸಿದ್ದರು.
ಈ ವೇಳೆ ‘ವಿಜಯವಾಣಿ’ ಜತೆ ಮಾತನಾಡಿದ ನ್ಯಾಯಾಧೀಶ ಎಂ. ಮಹೇಂದ್ರ, ನಾನು ಕೂಡ ಸರ್ಕಾರಿ ಶಾಲಾ-ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದೆ. ನನ್ನ ಮಗನಿಗೂ ಸರ್ಕಾರಿ ಅಂಗನವಾಡಿಯಲ್ಲೇ ಶಿಕ್ಷಣ ಕೊಡಿಸಬೇಕು ಎಂಬ ಮಹಾದಾಸೆ ಇದೆ. ಹಾಗಾಗಿ ನಮ್ಮ ವಸತಿಗೃಹದ ಸಮೀಪವಿರುವ ಅಂಗನವಾಡಿ ಕೇಂದ್ರಕ್ಕೆ ನನ್ನ ಮಗನನ್ನು ದಾಖಲಿಸಿದ್ದೇನೆ ಎಂದರು.
ಇತ್ತೀಚಿನ ದಿನಗಳಲ್ಲಿ ಕೆಲ ಪಾಲಕರು ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ. ಸರ್ಕಾರವೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಹಲವು ಸವಲತ್ತು ಒದಗಿಸುತ್ತಿದೆ. ಇದನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದು ನ್ಯಾಯಾಧೀಶರು ಮನವಿ ಮಾಡಿದರು.
ಅಂಗನವಾಡಿಗೆ ಮಗುವನ್ನು ದಾಖಲು ಮಾಡಿದ ನ್ಯಾಯಾಧೀಶರಿಗೆ ಸಿಡಿಪಿಒ ಸಿದ್ದಲಿಂಗಯ್ಯ ಹಾಗೂ ಅಂಗನವಾಡಿ ಕೇಂದ್ರದ ಮೇಲ್ವಿಚಾರಕಿ ಧನ್ಯವಾದ ಸಲ್ಲಿಸಿದರು.
ಕುಷ್ಟಗಿ ಪಟ್ಟಣದ ಪ್ರಧಾನ ಸಿವಿಲ್ ನ್ಯಾಯಾಧೀಶ ಚಂದ್ರಶೇಖರ ತಳವಾರ ಅವರೂ ಇತ್ತೀಚಿಗೆ ತನ್ನ ಮಗ ಶ್ರೀನಿವಾಸನನ್ನು ಅಂಗನವಾಡಿ ಕೇಂದ್ರಕ್ಕೆ ದಾಖಲಿಸಿದ್ದನ್ನು ಸ್ಮರಿಸಿದರು.
ಮಗನನ್ನು ಅಂಗನವಾಡಿಗೆ ಸೇರಿಸಿದ ಕೊಪ್ಪಳದ ಕುಷ್ಟಗಿ ಜಡ್ಜ್! ಕಾರಣ ಕೇಳಿದ್ರೆ ಮೆಚ್ಚಿಕೊಳ್ತೀರಿ…
ನೀ ಆ ಮನೇಲಿ ಏನೇನ್ ಮಾಡ್ದೆ ಅಂತಾ ಗೊತ್ತು… ಬಿಜೆಪಿ ಶಾಸಕ-ಮಹಿಳಾ ಅಧಿಕಾರಿ ನಡುವಿನ ಸ್ಫೋಟಕ ಸಂಭಾಷಣೆ