ಪ್ರಯಾಗ್ರಾಜ್: ಉತ್ತರ ಪ್ರದೇಶದ ಮಸೀದಿಗಳಲ್ಲಿ ಅಜಾನ್ ಮಾಡುವಾಗ ಮುಯೆಸಿನ್ (ಮಹಮ್ಮದೀಯ ಘೋಷಕ) ಲೌಡ್ಸ್ಪೀಕರ್ಗಳನ್ನು ಬಲಸುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಮುಯೆಸಿನ್ ಅವರ ಲೌಡ್ಸ್ಪೀಕರ್ ಇಲ್ಲದೆ ಮಸೀದಿಯ ಪ್ರಾಂಗಣದಲ್ಲಿ ತಮ್ಮದೇ ಧ್ವನಿಯಲ್ಲಿ ಅಜಾನ್ ಮಾಡಲು ಯಾವುದೇ ಅಡ್ಡಿಯಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ರಾಜ್ಯದಲ್ಲಿ ಕೋವಿಡ್ 19 ಹರಡುವಿಕೆ ತಡೆಯಲು ಲಾಕ್ಡೌನ್ ಜಾರಿಯಲ್ಲಿದೆ. ಮುಯೆಸಿನ್ ಅವರು ತಮ್ಮ ಧ್ವನಿಯನ್ನು ಬಳಸಿ ಮಸೀದಿ ಪ್ರಾಂಗಣದಲ್ಲಿ ಅಜಾನ್ ಮಾಡುವುದು ರಾಜ್ಯ ಸರ್ಕಾರ ಹೊರಡಿಸಿರುವ ಲಾಕ್ಡೌನ್ ನಿಯಮದ ಉಲ್ಲಂಘನೆಯಾಗುತ್ತದೆ ಎಂದು ಹೇಳಲಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ನ ನ್ಯಾಯಪೀಠ ಹೇಳಿದೆ.
ಇದನ್ನೂ ಓದಿ: ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ತಿಂಗಳಾಂತ್ಯದವರೆಗೆ ಲಾಕ್ಡೌನ್ ವಿಸ್ತರಣೆ
ಕಾನೂನಿನ್ವಯ ಜಿಲ್ಲಾಧಿಕಾರಿಯವರ ಅನುಮತಿ ಪಡೆಯದೆ ಅಜಾನ್ಗಾಗಿ ಲೌಡ್ಸ್ಪೀಕರ್ಗಳನ್ನು ಬಳಸುವುದು ಕಾನೂನಿನ ಉಲ್ಲಂಘನೆಯಾಗುತ್ತದೆ ಎಂದು ಅದು ಅಭಿಪ್ರಾಯಪಟ್ಟಿದೆ.
ಅಜಾನ್ ಎಂಬುದು ಇಸ್ಲಾಂ ಧರ್ಮದ ಅವಿಭಾಜ್ಯ ಅಂಗ. ಹಾಗೆಂದು ಲೌಡ್ಸ್ಪೀಕರ್ ಅಥವಾ ಬೇರಾವುದೇ ಧ್ವನಿವರ್ಧಕವನ್ನು ಬಳಸಿ ಅಜಾನ್ ಹೇಳಬೇಕೆಂಬುದನ್ನು ಇಸ್ಲಾಂ ಧರ್ಮದ ಅವಿಭಾಜ್ಯ ಅಂಗ ಎಂದು ಹೇಳಲಾಗುವುದಿಲ್ಲ. ಹಾಗೂ ಸಂವಿಧಾನದ 25ನೇ ವಿಧಿಯಲ್ಲಿ ವಿವರಿಸಲಾಗಿರುವಂತೆ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಹೇಳುವುದು ತಪ್ಪಾಗುತ್ತದೆ ಎಂದು ಅದು ಹೇಳಿದೆ.
ಮಾನವ ಧ್ವನಿಯಲ್ಲಿ ಅಜಾನ್ ಮಾಡುವುದು ಕೋವಿಡ್ 19 ಹರಡುವಿಕೆ ತಡೆಗಟ್ಟಲು ಜಾರಿಗೊಳಿಸಲಾಗಿರುವ ನಿಯಮಗಳ ಉಲ್ಲಂಘನೆಯಾಗುತ್ತದೆ ಎಂಬ ಉತ್ತರ ಪ್ರದೇಶ ಸರ್ಕಾರದ ವಾದವನ್ನು ಒಪ್ಪಲು ನ್ಯಾಯಪೀಠ ನಿರಾಕರಿಸಿತು. ತನ್ಮೂಲಕ ಅದು ಘಾಜಿಪುರ ಮಸೀದಿಗಳಲ್ಲಿ ಅಜಾನ್ ಮಾಡುವುದನ್ನು ನಿರ್ಬಂಧಿಸಿರುವ ಸರ್ಕಾರದ ಕ್ರಮವನ್ನು ರದ್ದುಗೊಳಿಸಬೇಕು ಎಂದು ಕೋರಿ ಬಿಎಸ್ಪಿಯ ಘಾಜಿಪುರ ಸಂಸದ ಅಫ್ಜಲ್ ಅನ್ಸಾರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಶಶಿಕಾಂತ್ ಗುಪ್ತಾ ಮತ್ತು ಅಜಿತ್ ಕುಮಾರ್ ಅವರಿದ್ದ ನ್ಯಾಯಪೀಠ ಇತ್ಯರ್ಥಗೊಳಿಸಿತು.
‘ನನ್ನ ಮಗನೊಬ್ಬನ ಬಿಡುಗಡೆ ಬೇಡವೇ ಬೇಡ, ಎಲ್ಲ ಸೈನಿಕರು ನನ್ನ ಮಕ್ಕಳಿದ್ದಂತೆ’ ಎಂದು ಪಾಕ್ಗೆ ಖಂಡತುಂಡವಾಗಿ ಹೇಳಿದ್ದ ಜನರಲ್ ಕಾರ್ಯಪ್ಪ..