ನಾಯಕನಹಟ್ಟಿ: ಕರೊನಾ ವೈರಸ್ ಕುರಿತು ಮುಂಜಾಗ್ರತೆ ವಹಿಸುವ ಹಿನ್ನೆಲೆಯಲ್ಲಿ ಮಾ.21ರಿಂದ ಮುಂದಿನ ಆದೇಶದವರೆಗೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜೆ.ಪಿ.ರವಿಶಂಕರ್ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ರಥದ ಕಳಶ ಇಳಿಸಿದ ಬಳಿಕ ಮಾತನಾಡಿ, ಮುಜರಾಯಿ ಇಲಾಖೆ ಆಯುಕ್ತರ ಆದೇಶದಂತೆ ದೇವಾಲಯದಲ್ಲಿ ಯಾವುದೇ ಸಾರ್ವಜನಿಕ ಉತ್ಸವಗಳು, ಹಬ್ಬ ಹರಿದಿನಗಳು, ವಿಶೇಷ ಪೂಜೆಗಳು, ಸ್ವಾಮಿಗೆ ರುದ್ರಾಭಿಷೇಕ, ನಿತ್ಯ ಅರ್ಚನೆ ಸೇರಿ ಪೂಜೆಗಳು ನಡೆಯುವುದಿಲ್ಲ ಎಂದರು.
ಪೂರ್ವ ನಿಗದಿಯಾಗಿರುವ ನಿತ್ಯ ರುದ್ರಾಭಿಷೇಕ ಕಾರ್ಯಕ್ರಮವನ್ನು ಆ ದಿನದ ಭಕ್ತರ ಹೆಸರಲ್ಲಿ ದೇವಾಲಯದಿಂದಲೇ ನೆರವೇರಿಸಲಾಗುವುದು. ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಇರುವುದಿಲ್ಲ. ದೇವಾಲಯದ ವಸತಿ ಗೃಹ, ಅತಿಥಿ ಗೃಹಗಳನ್ನು ಭಕ್ತರಿಗೆ ನೀಡುವುದಿಲ್ಲ. ದಾಸೋಹ ಸೇವೆ ನಿಲ್ಲಿಸಲಾಗಿದೆ ಎಂದು ತಿಳಿಸಿದರು.
ಸಮಿತಿ ಸದಸ್ಯರಾದ ಗೋವಿಂದರಾಜು, ಮುನಿಯಪ್ಪ, ರುದ್ರಮುನಿ, ಎಸ್.ಟಿ.ತಿಪ್ಪೇಸ್ವಾಮಿ ರೆಡ್ಡಿ, ಸತೀಶ್ ಇದ್ದರು.