ನವದೆಹಲಿ: 1977ರ ಲೋಕಸಭೆ ಚುನಾವಣೆಯಲ್ಲಿ (ತುರ್ತುಪರಿಸ್ಥಿತಿಯ ನಂತರ) ಯಾವುದೇ ಪ್ರಧಾನಿ ಸ್ಥಾನಕ್ಕೆ ಯಾರನ್ನೂ ಬಿಂಬಿಸಿರಲಿಲ್ಲ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ಮುಂಬರುವ 2024ರ ಚುನಾವಣೆಗೆ ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟದಲ್ಲಿ ಪ್ರಧಾನಿ ಅಭ್ಯರ್ಥಿಯನ್ನಾಗಿ ಯಾರನ್ನೂ ಬಿಂಬಿಸದಿರುವುದು ಹಾಗೂ ಮೈತ್ರಿಕೂಟದ ಕೆಲವು ಪಕ್ಷಗಳು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರತಿಪಕ್ಷಗಳ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಮಾಡುವ ಕುರಿತು ಕೆಲವರು ಪ್ರಸ್ತಾಪಿಸಿರುವ ಹಿನ್ನೆಲೆಯಲ್ಲಿ ಪವಾರ್ ಈ ಹೇಳಿಕೆ ನೀಡಿದ್ದಾರೆ.
1977ರಲ್ಲಿ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಮೈತ್ರಿಕೂಟ ಗೆದ್ದ ನಂತರ, ಮೊರಾರ್ಜಿ ದೇಸಾಯಿ ಅವರನ್ನು ಪ್ರಧಾನಿ ಮಾಡಲಾಯಿತು, ಪ್ರಧಾನಿ ಅಭ್ಯರ್ಥಿಯನ್ನು ಬಿಂಬಿಸದಿದ್ದರೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಪವಾರ್ ಹೇಳಿದರು.
ಜನರು ಬದಲಾವಣೆ ಮಾಡುವ ಮನಸ್ಥಿತಿಯಲ್ಲಿದ್ದರೆ, ಬದಲಾವಣೆಯನ್ನು ಅವರು ತಂದೇ ತರುತ್ತಾರೆ ಎಂದೂ ಪವಾರ್ ಹೇಳಿದರು.
ಏತನ್ಮಧ್ಯೆ, ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಅವರು ಪವಾರ್ ಅವರ ಹೇಳಿಕೆಗಳನ್ನು ಉಲ್ಲೇಖಿಸಿ, “ಖರ್ಗೆಜಿ ಹೆಸರನ್ನು ದೀದಿ (ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ) ಮುಂದಿಟ್ಟಿರುವ ಬಗ್ಗೆ ಕಾಂಗ್ರೆಸ್ ಸಹ ಸಂತೋಷವಾಗಿಲ್ಲ ಎಂದು ಹೇಳಿದ್ದಾರೆ.
ವಿರೋಧ ಪಕ್ಷದ ಮೈತ್ರಿಕೂಟದಲ್ಲಿ ಒಡಕು ಮತ್ತೆ ಕಂಡುಬಂದಿದೆ ಎಂದು ಅವರು ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.
ಶುಕ್ರವಾರ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಡುವೆ “ಅಗಾಧ ವ್ಯತ್ಯಾಸ” ಇದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜನರು ಮತ್ತೆ ಮೋದಿ ಅವರನ್ನು ಬೆಂಬಲಿಸುತ್ತಾರೆ ಎಂದು ಹೇಳಿದ್ದರು.
ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಜಿತ್ ಪವಾರ್, ಬಿಜೆಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಜತೆಗಿನ ಮೈತ್ರಿಗೆ ದ್ರೋಹ ಮಾಡುವುದಿಲ್ಲ ಎಂದು ಹೇಳಿದ್ದಾರೆ.
“ಮೋದಿ ಮತ್ತು ಖರ್ಗೆ ನಡುವೆ ಅಗಾಧ ವ್ಯತ್ಯಾಸವಿದೆ. ಭಾರತದ ಜನರು ಮತ್ತೊಮ್ಮೆ ಮೋದಿಯನ್ನು ಬೆಂಬಲಿಸುತ್ತಾರೆ ಮತ್ತು ಅವರ ನಾಯಕತ್ವವನ್ನು ಬೆಂಬಲಿಸಲು ಎಲ್ಲರೂ ಒಗ್ಗೂಡಬೇಕು” ಎಂದು ಅವರು ಹೇಳಿದರು.
ಈ ವರ್ಷ ಜುಲೈನಲ್ಲಿ ಎನ್ಸಿಪಿಯನ್ನು ವಿಭಜಿಸಿ ಆಡಳಿತಾರೂಢ ಮಹಾಯುತಿ (ಮಹಾ ಮೈತ್ರಿ)ಗೆ ಸೇರಿದ್ದ ಅಜಿತ್ ಪವಾರ್ ಅವರು ತಮ್ಮ ಹೊಸ ಪಾಲುದಾರರಿಗೆ ದ್ರೋಹ ಮಾಡುವುದಿಲ್ಲ, ಆದರೆ ಬಿಜೆಪಿಯ ಚಿಹ್ನೆಯ ಮೇಲೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದರು.