ಗಂಗಾವತಿ: ಉದ್ಯೋಗ ಖಾತರಿ ಯೋಜನೆಯಡಿ ಹೊಸ ಕೆಲಸ ಮತ್ತು ಟ್ರ್ಯಾಕ್ಟರ್ ಬಾಡಿಗೆ ನೀಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಸಮಿತಿ ಸದಸ್ಯರು ನಗರದ ತಾಪಂ ಕಚೇರಿ ಮುಂದೆ ಸೋಮವಾರ ಪ್ರತಿಭಟಿಸಿ ತಾಪಂ ಇಒ ಲಕ್ಷ್ಮಿದೇವಿ ಯಾದವ್ರಿಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಟ್ರ್ಯಾಕ್ಟರ್ ಸ್ಟಂಟ್ ನಿಷೇಧಿಸಿದ ಪಂಜಾಬ್ ಸಿಎಂ ಭಗವಂತ್ ಮಾನ್!
ತಾಲೂಕು ಸಮಿತಿ ಕಾರ್ಯದರ್ಶಿ ಶ್ರೀನಿವಾಸ ಹೊಸಳ್ಳಿ ಮಾತನಾಡಿ, ತಾಲೂಕಿನಲ್ಲಿ ಬರ ಬಿದ್ದಿದ್ದು, ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ನರೇಗಾ ಯೋಜನೆಯಡಿ ಕೆಲಸ ಸೃಷ್ಟಿಸದ ಪರಿಣಾಮ ಚಿಕ್ಕಜಂತಕಲ್ ಗ್ರಾಪಂ ವ್ಯಾಪ್ತಿಯ ನಾಗನಹಳ್ಳಿ, ವಿನೋಬನಗರ, ಅಯೋಧ್ಯಾ, ಕೆ.ಡಿ.ನಗರ ಮತ್ತು ಹೊಸಳ್ಳಿ ಗ್ರಾಮದ ಜನರು ಉದ್ಯೋಗಕ್ಕಾಗಿ ಗುಳೆ ಹೋಗುವ ಸ್ಥಿತಿ ಒದಗಿದೆ.
ಕಲಕೇರಿ, ಜೀರಾಳ, ನಾಗಲಾಪುರ ಕೆರೆಗಳ ಹೂಳೆತ್ತುವ ಕಾಮಗಾರಿಗೆ ತೆರಳಿದ ಕಾರ್ಮಿಕರ ಟ್ರಾೃಕ್ಟರ್ ಬಾಡಿಗೆ ಇದುವರಿಗೂ ನೀಡಿಲ್ಲ. ಉದ್ಯೋಗ ಸೃಷ್ಟಿಸುವುದರ ಜತೆಗೆ 150ದಿನಕ್ಕೆ ಹೆಚ್ಚಿಸಬೇಕು. ಕಾಯಕ ಬಂಧುಗಳ, ಮೇಟಿಗಳ ಪ್ರೋತ್ಸಾಹಧನ ವಿತರಣೆ, ಕಾಮಗಾರಿ ಸ್ಥಳದಲ್ಲಿ ಕುಡಿವ ನೀರು, ನೆರಳಿನ ವ್ಯವಸ್ಥೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ತಾಲೂಕಾಧ್ಯಕ್ಷ ಶಿವಣ್ಣ ಬೆಣಕಲ್, ಪದಾಧಿಕಾರಿಗಳಾದ ಯಮನೂರಪ್ಪ, ನಾಗಮ್ಮ, ಪರಶುರಾಮ, ಹುಲಿಗೆಮ್ಮ, ದಾನಪ್ಪ ಅಯೋಧ್ಯಾ, ಗಂಗಮ್ಮ, ಚಂದ್ರಪ್ಪ, ಈರಮ್ಮ, ಮರಿಸ್ವಾಮಿ, ನಿಂಗಮ್ಮ, ದುರುಗಪ್ಪ, ಮಲ್ಲಿಕಾರ್ಜುನ ಇತರರಿದ್ದರು.