ಸಾಗರ: ಪ್ರತಿಯೊಬ್ಬ ಮನುಷ್ಯನು ರೂಪುಗೊಳ್ಳಲು ತಾಯಿಯೇ ಸೂರ್ತಿ. ತಾಯಿಗಿಂತ ಮಿಗಿಲಾದ ಮತ್ತೊಂದು ಸಂಬಂಧವಿಲ್ಲ ಎಂದು ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಹೇಳಿದರು.
ರಂಗಮಂದಿರದಲ್ಲಿ ನಗರಸಭೆಯು ಮಂಗಳವಾರ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಧೈರ್ಯ, ತಾಳ್ಮೆ, ಸಹನೆಗೆ ಪರ್ಯಾಯ ಪದವೇ ಮಹಿಳೆ. ಕುಟುಂಬದ ಜತೆಗೆ ಸಮಾಜವನ್ನು ನಿರ್ವಹಿಸುವ ಮಹಿಳೆಯು ತನಗೆ ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ಎಲ್ಲರ ಮೆಚ್ಚುಗೆ ಗಳಿಸುತ್ತಾಳೆ. ಕೃಷಿ, ಆರೋಗ್ಯ, ರಾಜಕೀಯ, ಶಿಕ್ಷಣ, ಸಾಮಾಜಿಕ, ಧಾರ್ಮಿಕ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ಮಹಿಳೆಯರ ಸಾಧನೆ ಗಮನಾರ್ಹ ಎಂದು ತಿಳಿಸಿದರು.
ಆಧುನಿಕ ದಿನಗಳಲ್ಲಿ ಯಂತ್ರಗಳು ಮಕ್ಕಳ ಮನಸ್ಸನ್ನು ದಿಕ್ಕು ತಪ್ಪಿಸುತ್ತಿವೆ. ಮನೆಯಲ್ಲಿ ಮಕ್ಕಳಿಗೆ ಸಂಸ್ಕಾರಯುತ ಮಾರ್ಗ ಕಲಿಸುತ್ತಿದ್ದಾರಾ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಾಗಿದೆ. ಆಧುನಿಕತೆಯ ಪ್ರಮಾದಗಳಿಗೆ ಮಕ್ಕಳು ಬಲಿಯಾಗದಂತೆ ನಾವು ನೋಡಿಕೊಳ್ಳಬೇಕಿದೆ ಎಂದರು.
ನಗರಸಭೆ ಉಪಾಧ್ಯಕ್ಷ ವಿ.ಮಹೇಶ್, ಸಹಾಯಕ ಕಾರ್ಯಪಾಲಕ ಅಭಿಯಂತ ಎಚ್.ಕೆ.ನಾಗಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಅರವಿಂದ ರಾಯ್ಕರ್, ಪರಿಸರ ಅಭಿಯಂತ ಮದನ್, ಪೌರ ಕಾರ್ಮಿಕರಾದ ಪೆÇನ್ನಮ್ಮ, ನಾದೀರಾ ಪರ್ವಿನ್ ಇದ್ದರು.