ಮಹಾಲಿಂಗಪುರ: ಹಿಂದೂಗಳ ಪವಿತ್ರ ಮಾಸ ಶ್ರಾವಣ ಮಾಸದ ಸಮಾರೋಪ ನಿಮಿತ್ಯವಾಗಿ ಪಟ್ಟಣದ ಆರಾಧ್ಯ ದೈವ, ಪವಾಡ ಪುರುಷ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರವಿವಾರ ಮಧ್ಯಾಹ್ನ ಸಾವಿರಾರು ಭಕ್ತರ ಸಮ್ಮುಖದಲ್ಲಿ ಪ್ರಸಕ್ತ ವರ್ಷದ ಶ್ರಾವಣ ಮಾಸದ ಸಾರ್ವಜನಿಕ ಜಟೋತ್ಸವ ಸಂಭ್ರಮದಿAದ ನಡೆಯಿತು.
ಸಾರ್ವಜನಿಕ ಜಟೋತ್ಸವ ನಿಮಿತ್ಯ ಬಾಳೆಗಿಡ, ಕಬ್ಬು, ಹೂವಿನಿಂದ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಜಟೋತ್ಸವ ಮತ್ತು ಮಹಾಪೂಜೆ ಹಾಗೂ ಬೆಳ್ಳಿ ರಥೋತ್ಸವ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ಕರಡಿ ಕಲಾವಿದರು ಕರಡಿ ಸೇವೆ ಸಲ್ಲಿಸಿದರು.
ಶ್ರಾವಣ ಮಾಸದ ವಿಶೇಷ ಪೂಜೆಯಲ್ಲಿ ಭಾಗವಹಿಸಿದವರಿಗೆ ತಮ್ಮ ಇಷ್ಠಾರ್ಥಸಿದ್ಧಿಗಳು ದೊರೆಯುತ್ತವೆ ಎಂಬ ಪ್ರತೀತಿ ಇದೆ. ತಮ್ಮ ಇಷ್ಟಾರ್ಥಗಳ ಹರಕೆ ಹೊತ್ತ ಭಕ್ತರು ಶ್ರಾವಣ ಮಾಸ ಪೂರ್ತಿ ದಿನಕ್ಕೆ ನಾಲ್ಕೈದು ಜನರಂತೆ ಸರತಿಯಲ್ಲಿ ಜಟೋತ್ಸವ, ಬೆಳ್ಳಿ ರಥೋತ್ಸವ ಮತ್ತು ಮಹಾಪ್ರಸಾದ ಸೇವೆಯನ್ನು ಸಲ್ಲಿಸಿ ಕೃತಾರ್ಥರಾದರು.
ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀಮಠದ ವತಿಯಿಂದ ಮಹಾಪ್ರಸಾದಕ್ಕಾಗಿ ಮೂರು ಕ್ವಿಂಟಾಲ್ ಹಾಲುಗ್ಗಿ, ಅನ್ನಪ್ರಸಾದ ತಯಾರಿಸಲಾಗಿತ್ತು. ಮಧ್ಯಾಹ್ನ ಎರಡು ಗಂಟೆಯಿಂದ ಸಂಜೆವರೆಗೂ ಸಾವಿರಾರು ಭಕ್ತರು ಮಹಾ ಪ್ರಸಾದ ಸ್ವೀಕರಿಸಿದರು.
ಜಾತ್ರಾ ಕಮೀಟಿ ಅಧ್ಯಕ್ಷರಾದ ರವಿಗೌಡ ಪಾಟೀಲ, ಕೃಷ್ಣಗೌಡ ಪಾಟೀಲ, ಈಶ್ವರ ಮಠದ, ವಿಠ್ಠಲಗೌಡ ಪಾಟೀಲ, ಸುಭಾಸ ವಜ್ಜರಮಟ್ಟಿ, ಶ್ರೀಶೈಲ, ಸಿದ್ದಯ್ಯಾ, ಬ್ರಹ್ಮ ಕೋಟಿ, ಮಹಾಂತೇಶ ಹಳ್ಳಿ, ಶ್ರೀಧರ ಗಿಂಡೆ, ಪ್ರಮೋದ ಬಾಳಿಕಾಯಿ, ಬಸವರಾಜ ಕಬ್ಬೂರ, ಶೇಖರ ವಗ್ಗರ, ಸಂತೋಷ ಶಿರೋಳ, ಮಂಜುನಾಥ ವಿಭೂತಿಮಠ, ಅರುಣ ಪುರಾಣ ಕ, ಮಲ್ಲಪ್ಪ ಚಮಕೇರಿ ಸೇರಿದಂತೆ ಮಹಾಲಿಂಗೇಶ್ವರ ಮತ್ತು ಚನ್ನಗೀರೇಶ್ವರ ದೇವಸ್ಥಾನದ ಸೇವಕರು, ಭಕ್ತರು ಸೇವೆ ಸಲ್ಲಿಸಿದರು.