ಬೀದರ್: ತಾಲೂಕಿನ ಭಂಗೂರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಮೃತಪಟ್ಟಿದ್ದರೆ, ಐವರು ಗಾಯಗೊಂಡಿದ್ದಾರೆ.
ಹೈದರಾಬಾದ್ನ ಬೇಗಂಪೇಟ್ ನಿವಾಸಿಗಳಾದ ಗಿರಿಧರ (45), ಪ್ರಿಯಾ (15), ಅನೀತಾ (30), ಮಹೇಕ್ (2) ಹಾಗೂ ಚಾಲಕ ಜಗದೀಶ್ (35) ಮೃತಪಟ್ಟವರು. ಸ್ಥಳದಲ್ಲೇ ನಾಲ್ವರು ಕೊನೆಯುಸಿರೆಳೆದಿದ್ದರೆ, ಎರಡು ವರ್ಷದ ಮಗು ಮಹೇಕ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಅಸುನೀಗಿದೆ. ಗೀತಾ, ರಜಿತಾ, ಪ್ರಭಾವತಿ, ಶಾಲಿನಿ, ಹರ್ಷವರ್ಧನ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗಿರಿಧರ ಹೈದರಾಬಾದ್ ಠಾಣೆಯೊಂದರಲ್ಲಿ ಮುಖ್ಯ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಕಲಬುರಗಿ ಜಿಲ್ಲೆಯ ದೇವಲ ಗಾಣಗಾಪುರದ ದತ್ತಾತ್ರೇಯ ದರ್ಶನಕ್ಕಾಗಿ ಒಂದೇ ಕುಟುಂಬದ 10 ಸಂಬಂಧಿಕರು ಕಾರಿನಲ್ಲಿ ತೆರಳುತ್ತಿದ್ದರು. ಕಾರು ಕಂಟೇನರ್ಗೆ ಓವರ್ಟೇಕ್ ಮಾಡಿ ಮುಂದೆ ಹೋಗುವಾಗ ಡಿಕ್ಕಿ ಹೊಡೆದಿದೆ. ಮನ್ನಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.