ಕುಷ್ಟಗಿ: ಬಿಜೆಪಿಯವರು ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಬಹಿರಂಗ ವೇದಿಕೆಗೆ ಕರೆದು ಆರೋಪ ಸಾಬೀತು ಪಡಿಸಿದರೆ ಅದೇ ದಿನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಸವಾಲು ಹಾಕಿದರು.
ಪುರಸಭೆ ಸದಸ್ಯರ ಆರೋಪಕ್ಕೆ ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿದರು. ಸದ್ಯ 20 ದಿನ ವೈಯಕ್ತಿಕ ಕೆಲಸವಿದೆ. ಮಾರ್ಚ್ ಮೊದಲ ವಾರದಲ್ಲಿ ಅವರು ಹೇಳಿದ ಸ್ಥಳಕ್ಕೆ ಹೋಗಲು ಸಿದ್ಧನಿದ್ದೇನೆ. ಬೇಕೆಂದರೆ ಸಂತೆ ಮೈದಾನದ ಬನ್ನಿ ಮಹಾಂಕಾಳಿ ಸನ್ನಿಧಿಗೆ ಕರೆದರೂ ತೆರಳುತ್ತೇನೆ. ಬನ್ನಿಮಹಾಂಕಾಳಿ ಯಾರಿಗಾದರೂ ಆಶೀರ್ವದಿಸಲಿ. ಕಾಮಗಾರಿಯ ಗುತ್ತಿಗೆದಾರರು ಯಾರೆಂಬುದೇ ಗೊತ್ತಿಲ್ಲ. ಇನ್ನು ಅನುದಾನ ಲೂಟಿ ದೂರದ ಮಾತು. ಯಾರಿಗೆ ಲೂಟಿ ಮಾಡಿ ರೂಢಿ ಇರುತ್ತದೆಯೋ ಅಂತಹವರ ಬಾಯಿಯಲ್ಲಿ ಇಂತಹ ಮಾತುಗಳು ಬರುತ್ತವೆ. ನನಗೆ ಲೂಟಿ ಎನ್ನುವ ಶಬ್ದವೇ ಗೊತ್ತಿಲ್ಲ ಎಂದರು. ಚುನಾವಣೆ ಸಮೀಪಿಸಿರುವುದರಿಂದ ಜನಪ್ರಿಯತೆ ಕುಗ್ಗಿಸಲು ಉದ್ದೇಶಪೂರ್ವಕವಾಗಿ ಆರೋಪಿಸುತ್ತಿದ್ದಾರೆ. ಜಾತಿ, ಪಕ್ಷ ಎಂಬುದನ್ನು ಶಾಸಕನಾದ ಮರುದಿವಸವೇ ತೆಗೆದು ಹಾಕಿದ್ದೇನೆ ಎಂದರು. ಪ್ರಮುಖರಾದ ಶೇಖರಗೌಡ ಪಾಟೀಲ್, ಶ್ಯಾಮರಾವ್ ಕುಲಕರ್ಣಿ, ಪರಶುರಾಮ ನಾಗರಾಳ, ಶಿವಶಂಕರಗೌಡ ಪಾಟೀಲ್ ಕಡೂರು ಇದ್ದರು.